ತುಮಕೂರು: ಆರ್ಥಿಕ ಸಂಕಷ್ಟದ ಕಾರಣಕ್ಕೆ ಸಾವಿರಾರು ಸಂಸ್ಥೆಗಳು, ಕೈಗಾರಿಕೆಗಳು ಮುಚ್ಚುವ ಹಂತದಲ್ಲಿದ್ದು ನಿರುದ್ಯೋಗ ಎಲ್ಲೆಡೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ನಿರುದ್ಯೋಗಿಗಳು, ಯುವಜನತೆ ಕೆಲಸ ಗಿಟ್ಟಿಸಿಕೊಂಡು ಜೀವನ ಕಟ್ಟಿಕೊಳ್ಳಬೇಕಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸಲಹೆ ನೀಡಿದರು.
ನಗರದ ಎಸ್ಎಸ್ಐಟಿ ಕಾಲೇಜು ಆವರಣದದಲ್ಲಿ ಶುಕ್ರವಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಾದರಿ ವೃತ್ತಿ ಕೇಂದ್ರ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗಮೇಳ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗವಿಲ್ಲದೆ ಜೀವನ ನಡೆಸುವುದು ಸಾಧ್ಯವಿಲ್ಲ, ಸಂಕಷ್ಟದ ದಿನಗಳನ್ನು ನಾವು ಕಳೆಯುತ್ತಿದ್ದು, ಬಹುತೇಕ ಕೈಗಾರಿಕೆಗಳು ಮುಚ್ಚುವ ಸಂದರ್ಭ ಬಂದಿದೆ. ಲಕ್ಷಾಂತರ ಜನ ಕರೊನಾ ಕಾರಣದಿಂದ ಉದ್ಯೋಗ ಕಳೆದುಕೊಂಡು ಪಟ್ಟಣದಿಂದ ಹಳ್ಳಿಗೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗ ನೀಡಲು ಮುಂದಾಗಿರುವ ಸಂಸ್ಥೆಗಳನ್ನು ಶ್ಲಾಘಿಸಬೇಕು ಎಂದರು.
ಜಿಲ್ಲೆಯಲ್ಲಿ ಕೈಗಾರಿಕ ವೆಬ್ ನಿರ್ಮಾಣವಾಗಿದ್ದು, ನಗರದ ಹೊರಹೊಲಯದಲ್ಲಿರುವ ವಸಂತ ನರಸಾಪುರ ಕೈಗಾರಿಕ ಪ್ರದೇಶ ಹಾಗೂ ಎಚ್.ಎ.ಎಲ್ ಕೈಗಾರಿಕ ವೆಬ್ನಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಜಿಲ್ಲೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಉದ್ಯೋಗ ಅಧಿಕಾರಿ ಎಸ್.ಕವಿತಾ ಮಾತನಾಡಿ, ಎಸ್ಎಸ್ಎಲ್ಸಿ, ಪದವಿ ಹಾಗೂ ವೃತ್ತಿಪರ ಕೋರ್ಸ್ಗಳ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ಪ್ರತ್ಯೇಕ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯನ್ನು ನಿರುದ್ಯೋಗ ರಹಿತ ಮಾದರಿ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸಮರ್ಥ ೌಂಡೇಶನ್ ಸಂಸ್ಥೆ 100 ಅಂಗವಿಕಲರಿಗೆ ಉದ್ಯೋಗ ನೀಡುವುದಾಗಿ ಖಾತ್ರಿಪಡಿಸಿತು. ಎಸ್ಎಸ್ಐಟಿ ಪ್ರಾಚಾರ್ಯ ಡಾ.ಎಂ.ಎಸ್.ರವಿಪ್ರಕಾಶ್, ಎಸ್ಎಸ್ಐಬಿಎಂ ಪ್ರಾಚಾರ್ಯ ಡಾ.ಎನ್.ಎಸ್.ರವಿಕುಮಾರ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಇದ್ದರು.