ಚಿಂಚೋಳಿ: ನಾವು ಪೊಲೀಸರು ಎಂದು ಹೇಳಿ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ಜನರಿಂದ ಹಣ ಹಾಗೂ ಆಭರಣ ದೋಚಿದ ಪ್ರಸಂಗ ಸುಲೇಪೇಟ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಜರುಗಿದೆ.
ಪೆಂಚನಪಳ್ಳಿ ಗ್ರಾಮದ ಚಂದ್ರಶೇಖರ ಅಣ್ಣೆಪ್ಪನೋರ ಎಂಬುವವರಿಂದ ನಗದು ಹಣ, 12 ಗ್ರಾಂ ಸುತ್ತುಂಗುರ ಮತ್ತು 6 ಗ್ರಾಂ ಹರಳು ಉಂಗುರ ದೋಚಿದ್ದಾರೆ.
ಘಟನೆ ಹಿನ್ನಲೆ: ಚಂದ್ರಶೇಖರ ಅವರು ಸುತ್ತಲಿನ ಹಳ್ಳಿಗಳಿಗೆ ದಿನಪತ್ರಿಕೆಗಳನ್ನು ಸರಬರಾಜು ಮಾಡುತ್ತಾರೆ. ಎಂದಿನಂತೆ ಶನಿವಾರ ಬೆಳಗ್ಗೆ ಬೈಕ್ನಲ್ಲಿ ಪತ್ರಿಕೆ ತೆಗೆದುಕೊಂಡು ಹೋಗುತ್ತಿದ್ದು, ಸುಲೇಪೇಟ ಮಾರ್ಗ ಮಧ್ಯೆ ಮೂವರು ನಕಲಿ ಪೊಲೀಸರು ತಡೆದಿದ್ದಾರೆ. ಹಿಂದಿ ಭಾಷೆಯಲ್ಲಿ ಹಳೆಯ ಗುರುತಿನ ಚೀಟಿ ತೋರಿಸಿದ್ದು, ಈ ಭಾಗದಲ್ಲಿ ಅಕ್ರಮ ಗಾಂಜಾ ಮಾರಾಟ ಹೆಚ್ಚಾಗಿದ್ದರಿಂದ ಪರಿಶೀಲನೆ ನಡೆಸುತ್ತಿದ್ದೇವೆ. ನಿಮ್ಮಲ್ಲಿರುವ ವಸ್ತುಗಳನ್ನು ತೋರಿಸಿ ಎಂದು ಪರಿಶೀಲನೆ ಮಾಡಿದ್ದಾರೆ. ಒಂದಿಷ್ಟು ಪ್ರಶ್ನೆ ಮಾಡಿದ್ದರಿಂದ ಪೊಲೀಸ್ ಠಾಣೆಗೆ ನಡಿ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕವೂ ಹಣ ನೀಡದಿದ್ದರಿಂದ ಹಿಂಬದಿಯಿಂದ ಇಬ್ಬರು ಚಾಕು ಚುಚ್ಚಿ, ಆಭರಣ ಹಾಗೂ ಹಣ ಕಸಿದುಕೊಂಡಿದ್ದಾರೆ. ಬಳಿಕ ಜನರು ಬರುವುದನ್ನು ನೋಡಿ ಪರಾರಿಯಾಗಿದ್ದಾರೆ.
ಚಂದ್ರಶೇಖರ ಅವರು ಸುಲೇಪೇಟ ಠಾಣೆಗೆ ತೆರಳಿ, ಘಟನೆಯನ್ನು ವಿವರಿಸಿ ದೂರು ದಾಖಲಿಸಿದ್ದಾರೆ.
ಎಸ್ಪಿ ಇಶಾ ಪಂತ್ ಹಾಗೂ ಡಿವೈಎಸ್ಪಿ ಕೆ.ಬಸವರಾಜ ಅವರ ಆದೇಶದಂತೆ ಪಿಎಸ್ಐ ಸುಖಾನಂದ ಸಿಂಗೆ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಕಾಳಗಿ ಹಾಗೂ ಸುಲೇಪೇಟ ಪೊಲೀಸರ ತಂಡ ತೆಲಂಗಾಣ, ಮಹಾರಾಷ್ಟç ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ತೆರಳಿದೆ.