ಬಳ್ಳಾರಿ : ಬಸವಣ್ಣನವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು. ಆಚರಣೆಗಿಂತ ಅವರ ವಿಚಾರಧಾರೆಗಳನ್ನು ಪಾಲಿಸಬೇಕು ಎಂದು ವಿಎಸ್ಕೆ ವಿವಿ ಕುಲಪತಿ ಪ್ರೊ. ಜೆ. ತಿಪ್ಪೇರುದ್ರಪ್ಪ ಹೇಳಿದರು.
ಇಲ್ಲಿಯ ವಿಎಸ್ಕೆ ವಿವಿ ಯಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ 891ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನ ಸಾಹಿತ್ಯದ ಮೂಲಕ ಲಿಂಗ ಸಮಾನತೆ, ಅಸ್ಪಶ್ಯತೆ ನಿವಾರಣೆ ವಿರುದ್ಧ ಹೋರಾಡಲು ತಮ್ಮ ವೈಚಾರಿಕತೆ ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದರು. ಶರಣರು ಕೇವಲ ಮಾತಿನ ಮಲ್ಲರಾಗಿರದೇ ನಡೆ ಧೀರರಾಗಿದ್ದರು. ಮೊದಲು ನಡೆದು ನಂತರ ನುಡಿಯುವುದು ಅವರ ಜೀವನಾದರ್ಶನವಾಗಿತ್ತು. ಅವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬಾಳಬೇಕು ಎಂದು ಹೇಳಿದರು.