ಬೀದರ್: ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಉಳಿಸಿ, ಬೆಳೆಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಟ್ಯಂತರ ರೂ. ಅನುದಾನ ನೀಡುತ್ತಿವೆ. ಆದರೆ ಕೆಲ ನಕಲಿ ಸಂಘ-ಸಂಸ್ಥೆಗಳು ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಜಿಲ್ಲಾ ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಬೇಸರ ವ್ಯಕ್ತಪಡಿಸಿದರು.
ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ ಜಾನಪದ ಉತ್ಸವದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಸಂಘ, ಸಂಸ್ಥೆಗಳು ಹೆಚ್ಚಾಗಿವೆ. ಸಕರ್ಾರದ ಅನುದಾನ ಲೂಟಿ ಹೊಡೆಯಲು ನಾಮಕೇವಾಸ್ತೆ ಕಾರ್ಯಕ್ರಮ ನಡೆಸಿ, ಲಕ್ಷಾಂತರ ರೂ. ಲೂಟಿ ಮಾಡುತ್ತಿವೆ. ಸಂಬಂಧಿತರು ಈ ವಿಷಯ ಗಂಭೀರ ಪರಿಗಣಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆ, ಸಂಸ್ಕೃತಿ ಜತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಹೆಚ್ಚೆಚ್ಚು ಅನುದಾನ ನೀಡಬೇಕು ಎಂದು ಹೇಳಿದರು.
ಹಿರಿಯ ರಂಗಕರ್ಮಿ ಮಹೇಶ ಪಾಟೀಲ್ ಮಾತನಾಡಿ, ಬೀದರ್ ಜಿಲ್ಲೆಯ ಸಂಗೀತ, ಸಾಹಿತ್ಯ, ನಾಟಕ ಮತ್ತು ಜಾನಪದ ಕಲೆಗಳು ಜಗತ್ತಿನಾದ್ಯಂತ ಹೆಸರು ಮಾಡುತ್ತಿವೆ. ನಮ್ಮತನ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಬಳ್ಳಾರಿಯ ನೃತ್ಯ ಕಲಾವಿದ ಮಯೂರಿ ಬಸವರಾಜ ಮಾತನಾಡಿ, ನಾಟ್ಯ ಶಾಸ್ತ್ರ 5ನೇ ವೇದವಾಗಿದೆ. ಯುವ ಪೀಳಿಗೆ ಪಾಶ್ಚಿಮಾತ್ಯ ನೃತ್ಯಗಳಿಗೆ ಮಾರು ಹೋಗದೆ, ಹಿಂದುಸ್ತಾನಿ, ಭರತನಾಟ್ಯ, ಕುಚಪುಡಿ ಸೇರಿ ಇತ್ಯಾದಿ ಭಾರತೀಯ ಶ್ರೇಷ್ಠ ಪರಂಪರೆಯ ನೃತ್ಯ ಕಲೆಗಳು ಅನುಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.