ಮುಂಬೈ: ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಕೆಲವು ವರ್ಷಗಳ ಹಿಂದೆ ದೀಪ್ತಿ ಎಂಬುವವರನ್ನು ಮದುವೆಯಾದರು. ಆದರೆ, ಮದುವೆಯಾಗಿ ಹಲವು ದಿನಗಳ ಕಾಲ ಅವರು ಈ ವಿಷಯವನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದರು. ಅವರ ಮದುವೆಯ ವಿಷಯವಾಗಿ ಗುಸುಗುಸುಗಳು ಕೇಳಿಬರುತ್ತಿದ್ದರೂ, ಶ್ರೇಯಸ್ ಮಾತ್ರ ಮದುವೆ ವಿಷಯವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಕೊನೆಗೊಂದು ದಿನ ಅಧಿಕೃತವಾಗಿ ದೀಪ್ತಿ ಕೈಹಡಿದಿದ್ದಾಗಿ ಹೇಳಿಕೊಂಡು, ಎಲ್ಲರ ಬಾಯಿ ಮುಚ್ಚಿಸಿದ್ದರು.
ಇದನ್ನೂ ಓದಿ: ಚಿತ್ರರಂಗದವರಿಗೆ ಲಸಿಕೆ ವಿತರಿಸಲು ಫಿಲ್ಮ್ ಚೇಂಬರ್ ಮನವಿ
ಇಷ್ಟಕ್ಕೂ ಶ್ರೇಯಸ್ ತಮ್ಮ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ? ಎಂಬ ಪ್ರಶ್ನೆ ಸಹಜ. ಈಗ ಆ ವಿಷಯವನ್ನು ಬಹಿರಂಗಪಡಿಸಿರುವ ಶ್ರೇಯಸ್, ಒಂದು ಪಕ್ಷ ಮದುವೆಯಾದ ವಿಷಯ ಹೇಳಿದ್ದರೆ, ಇಕ್ಬಾಲ್ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಶ್ರೇಯಸ್ಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಚಿತ್ರವೆಂದರೆ ಅದು ಇಕ್ಬಾಲ್. ಈ ಚಿತ್ರದಲ್ಲಿ ಅವರೊಬ್ಬ ಗ್ರಾಮೀಣ ಭಾಗದ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದರು. ಗಿರೀಶ್ ಕಾರ್ನಾಡ್, ನಾಸೀರುದ್ದೀನ್ ಷಾ ಮುಂತಾದವರು ಅಭಿನಯಿಸಿದ್ದ ಈ ಚಿತ್ರವನ್ನು ನಾಗೇಶ್ ಕುಕನೂರ್ ನಿರ್ದೇಶಿಸಿದ್ದರು.
ಈ ಚಿತ್ರದ ಶೂಟಿಂಗ್ ಶುರುವಾದ ಸಂದರ್ಭದಲ್ಲಿ ಶ್ರೇಯಸ್, ತಮ್ಮ ಮದುವೆಗೆ ಮೂರು ದಿನ ರಜೆ ಬೇಕು ಎಂದು ನಿರ್ದೇಶಕರನ್ನು ಕೇಳಿದರಂತೆ. ಇದನ್ನು ಕೇಳಿ ನಾಗೇಶ್ ಸಿಟ್ಟಾದರಂತೆ. ಮದುವೆ ಕ್ಯಾನ್ಸಲ್ ಮಾಡು ಎಂದು ಹಠ ಹಿಡಿದರಂತೆ. ಕಾರಣ, ಚಿತ್ರದಲ್ಲಿ ನಾಯಕ ಇನ್ನೂ ಯುವಕ. ಕ್ರಿಕೆಟಿಗನಾಗಬೇಕೆಂಬ ಮಹತ್ವಾಕಾಂಕ್ಷೆ ಇರುವವನು. ಅಂಥವನು ನಿಜಜೀವನದಲ್ಲಿ ಆಗಲೇ ಮದುವೆಯಾಗಿದ್ದಾನೆ ಎಂದು ಪ್ರೇಕ್ಷಕರಿಗೆ ಗೊತ್ತಾದರೆ, ಚಿತ್ರ ನೋಡುತ್ತಾರೋ ಇಲ್ಲವೋ ಎಂದು ಅವರು ಮದುವೆ ಕ್ಯಾನ್ಸಲ್ ಮಾಡುವುದಕ್ಕೆ ಹೇಳಿದ್ದರಂತೆ.
ಇದನ್ನೂ ಓದಿ: ಸ್ಟ್ರೇಟ್ ಫಾರ್ವರ್ಡ್ ಪ್ರಿಯಾಂಕಾ; ಬಿಗ್ ಬಾಸ್ನ ಕಿರುಪಯಣ ನೆನೆದ ಪಟಾಕಿ ಸುಂದರಿ
ಒಂದು ಕಡೆ ಒಳ್ಳೆಯ ಚಿತ್ರ, ಇನ್ನೊಂದು ಕಡೆ ಮದುವೆ … ಇವೆರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಬಿದ್ದ ಶ್ರೇಯಸ್, ಕೊನೆಗೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗುವವರೆಗೂ ಮದುವೆಯಾಗಿರುವ ವಿಷಯವನ್ನು ಎಲ್ಲೂ ಬಹಿರಂಗಪಡಿಸುವುದಿಲ್ಲ ಎಂದು ಪ್ರಮಾಣ ಮಾಡಿದರಂತೆ. ಆ ನಂತರವಷ್ಟೇ ನಾಗೇಶ್ ಕುಕನೂರ್, ಶ್ರೇಯಸ್ಗೆ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದ್ದು. ಈ ಚಿತ್ರ ಹಿಟ್ ಆಗಿದ್ದಷ್ಟೇ ಅಲ್ಲ, ಶ್ರೇಯಸ್ ಚಿತ್ರಬದುಕಿಗೆ ದೊಡ್ಡ ಬ್ರೇಕ್ ಸಹ ನೀಡಿದ್ದು ವಿಶೇಷ.