ಗದಗ: ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರಿ ನಿಯಮಗಳನ್ನು ಜನರು ಚಾಚೂ ತಪ್ಪದೇ ಪಾಲಿಸಬೇಕು. ಇದರಿಂದ ದುಬಾರಿ ದಂಡ ಪಾವತಿ, ಹಾಗೂ ಅಮೂಲ್ಯವಾದ ಪ್ರಾಣ ಹಾನಿ ತಪ್ಪುತ್ತದೆ ಎಂದು ಗದಗ ಸಂಚಾರ ಪೊಲೀಸ್ ಠಾಣೆಯ ಪಿಎಸ್.ಐ ಶಂಕುತಲಾ ನಾಯಕ ಹೇಳಿದರು.
ಸಮೀಪದ ಹಾತಲಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ಕೆ.ಎಲ್.ಇ ಸಂಸ್ಥೆಯ ಎಸ್.ಎ.ಮಾನ್ವಿ ಕಾನೂನು ಮಹಾವಿದ್ಯಾಲಯ ಮತ್ತು ಗ್ರಾಮ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಷ್ಟೀಯ ಸೇವಾ ಯೋಜನೆ ೫ನೇ ದಿನದ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಕಾಯ್ದೆಗಳು ಜನ ಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತಂದಿರುವುದು. ವಾಹನ ಚಾಲನೆ ಮಾಡುವಾಗ ಚಾಚೂ ತಪ್ಪದೆ ಹೆಲ್ಮೆಟ್ ಹಾಗೂ ಸಂಚಾರಿ ನಿಯಮ ಪಾಲನೆ ಮಾಡಿದಲ್ಲಿ ಅಪಘಾತ ತಪ್ಪುವ ಜತೆಗೆ ದಂಡ ತೆರೆವುದು ಹಾಗೂ ಪ್ರಾಣ ಹಾನಿ ತಪ್ಪಿಸಬಹುದು. ನಿಯಮಗಳನ್ನು ಮೀರುತ್ತಿರುವುದು ಬಹುತೇಕ ಯುವಜನತೆ ಜತೆ ವಿದ್ಯಾವಂತರೇ ಎನ್ನುತ್ತಿರುವುದು ನಿಜಕ್ಕೂ ವಿಷಾಧನೀಯ. ಈ ನಿಟ್ಟಿನಲ್ಲಿಇಲಾಖೆ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದರು.
ಪ್ರಮುಖ ನಿಯಮಗಳು: ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಚಾಲನೆ ವೇಳೆ ಮೊಬೈಲ್ ಬಳಕೆ ಬೇಡ, ದ್ವಿಚಕ್ರ ವಾಹನದಲ್ಲಿತ್ರೀಬಲ್ ರೈಡಿಂಗ್, ಮದ್ಯಪಾನ ಮಾಡಿ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಸೈಡ್ ಮಿರರ್ ಇಲ್ಲದ ವಾಹನ, ತುರ್ತು ವಾಹನಗಳಿಗೆ ದಾರಿ ಬಿಡದಿರುವುದು, ಅಜಾಗರೂಕತೆ ವಾಹನ ಚಾಲನೆ, ಮುಖ್ಯವಾಗಿ ಅಪ್ರಾಪ್ತರ ವಾಹನ ಚಾಲನೆ ಕಡ್ಡಾಯ ನಿಷೇಧ ಎಂದು ತಿಳಿಸಿದರು.
ಎಎಸ್.ಐ ಎಚ್.ಡಿ. ಗಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಕೆ.ಎಸ್.ಸ್ವಂಟಿ, ಶಿಕ್ಷಕ ಎಚ್.ಡಿ.ಕುರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಸಿ.ಬಿ. ರಣಗಟ್ಟಿಮಠ ಸೇರಿದಂತೆ ಇತರರಿದ್ದರು.ಯಮನಪ್ಪ ತಳವಾರ ಸ್ವಾಗತಿಸಿದರು. ಬಸವರಾಜ ಕರಡಿ ನಿರೂಪಿಸಿದರು.ಎನ್.ಭಾಗ್ಯಲಕ್ಷ್ಮೀ ವಂದಿಸಿದರು.