More

    ಶ್ರೀ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ

    ತಿ.ನರಸೀಪುರ: ತ್ರಿವೇಣಿ ಸಂಗಮ ಕ್ಷೇತ್ರ ಹಾಗೂ ದಕ್ಷಿಣ ಕಾಶಿ ಖ್ಯಾತಿಯ ತಿರುಮಕೂಡಲು ನರಸೀಪುರದ ಶ್ರೀ ಗುಂಜಾನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

    ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ಗೈರಿನಲ್ಲಿ ರಾಜಸ್ವ ನಿರೀಕ್ಷಕ ಮಹೇಂದ್ರ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

    ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಭಕ್ತಿ ಭಾವದಿಂದ ರಥ ಎಳೆದರು. ದೇವಾಲಯದಿಂದ ಆರಂಭಗೊಂಡ ರಥೋತ್ಸವ ವಿಶ್ವಕರ್ಮ ರಸ್ತೆ, ಪ್ರಾಥಮಿಕ ಶಾಲೆ ರಸ್ತೆ ಮೂಲಕ ತೇರಿನ ಬೀದಿಗೆ ಆಗಮಿಸಿ ಸ್ವಸ್ಥಾನ ತಲುಪಿತು.

    ಅಲಂಕೃತ ರಥದಲ್ಲಿ ವಿರಾಜಮಾನರಾಗಿದ್ದ ಮಹಾಲಕ್ಷ್ಮೀ ಸಮೇತ ಶ್ರೀ ಗುಂಜಾನರಸಿಂಹಸ್ವಾಮಿ ಉತ್ಸವ ಮೂರ್ತಿಗಳನ್ನು ಕಂಡು ಭಕ್ತರು ಪುಳಕಿತರಾದರು. ಚಲಿಸುತ್ತಿದ್ದ ರಥಕ್ಕೆ ಹಣ್ಣು, ದವನ ಎಸೆದು ಭಕ್ತಿಭಾವ ಮೆರೆಯಲಾಯಿತು.

    ರಥೋತ್ಸವದ ಹಿನ್ನೆಲೆಯಲ್ಲಿ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಸುತ್ತಮುತ್ತ ಹಾಗೂ ಪಟ್ಟಣದಲ್ಲಿ ಜನಸಂದಣಿ ಹೆಚ್ಚಿತ್ತು. ಈ ಬಾರಿ ಯವಕರ ಬಣ್ಣದೋಕುಳಿಗೆ ನಿಷೇಧ ಹೇರಲಾಗಿತ್ತು.

    ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪ್ರಧಾನ ಅರ್ಚಕ ಸಂಪತ್ ಕುಮಾರ್, ಆಗಮಿಕ ರಾಜೀವ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು,ಅಭಿಷೇಕ, ಪೂಜಾ ವಿಧಿವಿಧಾನಗಳು ಸಾಂಗವಾಗಿ ಜರುಗಿದವು.

    ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು. ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರ ಪಠಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

    ದೇವಸ್ಥಾನ ಪಾರುಪತ್ತೇದಾರ ಪ್ರದೀಪ್, ಪುಳ್ಳಾರಿಗೌಡ, ನಾಯಕ ಸಮಾಜದ ಯಜಮಾನ ಮಹದೇವಪ್ಪ, ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಮೆಡಿಕಲ್ ನಾಗರಾಜು, ಬಾದಾಮಿ ಮಂಜು, ಹುಣಸೂರು ಬಸವಣ್ಣ, ಟಿ.ಎಂ.ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಬಸವಣ್ಣ, ಬಿಜೆಪಿ ಅಧ್ಯಕ್ಷ ಶಿವಕುಮಾರ್ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಂಪ್ರದಾಯ ಪಾಲನೆ: ಅನೇಕ ವರ್ಷಗಳಿಂದಲೂ ನಡೆದು ಬಂದ ಸಂಪ್ರದಾಯದಂತೆ ವ್ಯಾಸರಾಜಪುರ ಗ್ರಾಮದ ಯಜಮಾನರು ಆಲಗೂಡು ಗ್ರಾಮಕ್ಕೆ ತೆರಳಿ ಅಲ್ಲಿನ ಯಜಮಾನರನ್ನು ರಥೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಅವರನ್ನು ಕರೆತಂದು ಪಟ್ಟಣದ ಯಜಮಾನರ ಜತೆಗೂಡಿ ಮಹಾ ಮಂಗಳಾರತಿ ನೆರವೇರಿಸಿ ಪ್ರದಕ್ಷಿಣೆ ಹಾಕಿದರು. ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ ನೆರವೇರಿದ ನಂತರ ಬ್ರಹ್ಮ ರಥೋತ್ಸವ ವಿಧ್ಯುಕ್ತವಾಗಿ ಆರಂಭವಾಯಿತು. ರಥೋತ್ಸವದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಚಾಮರಾಜನಗರ ಮೀಸಲು ಕ್ಷೇತ್ರದ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಹಾಗೂ ಕಾಂಗ್ರೆಸ್‌ನ ಸುನೀಲ್ ಬೋಸ್ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಮಜ್ಜಿಗೆ, ಪಾನಕ ವಿತರಣೆ
    ರಥೋತ್ಸವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ವರ್ತಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಜವಳಿ ಅಂಗಡಿ ಮಾಲೀಕರು, ಆಟೋ ಸಂಘದ ಮಾಲೀಕರು, ಶಾಮಿಯಾನ ಅಂಗಡಿಯವರು, ಹೋಟೆಲ್ ಮಾಲೀಕರ ಸಂಘದಿಂದ ಭಕ್ತರಿಗೆ ನೀರು, ಮಜ್ಜಿಗೆ, ಪಾನಕ ವಿತರಿಸಲಾಯಿತು. ಪಟ್ಟಣದ ವಿವಿಧ ಭಾಗದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

    ಯುವಕರ ಬಣ್ಣದೋಕುಳಿ, ಪೋಲಿಸರಿಂದ ಲಾಠಿ ಪ್ರಹಾರ
    ರಥೋತ್ಸವದ ವೇಳೆ ಬಣ್ಣದೋಕುಳಿಗೆ ತಾಲೂಕು ಆಡಳಿತ ನಿಷೇಧ ಹೇರಿತ್ತು. ಆದರೂ, ಕೆಲ ಯುವಕರು ಪರಸ್ಪರ ಬಣ್ಣ ಎರಚಿ ಚಿತ್ರನಟ ಸುದೀಪ್ ಭಾವಚಿತ್ರ ಇರುವ ಬಾವುಟವನ್ನು ಉತ್ಸವದ ವೇಳೆ ಪ್ರದರ್ಶಿಸಲು ಮುಂದಾದರು. ಇದಕ್ಕೆ ಅವಕಾಶ ಕೊಡದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

    ಮುಖಾಮುಖಿಯಾದರೂ ಮಾತಿಲ್ಲ
    ರಥೋತ್ಸವಕ್ಕೆ ಚಾಲನೆ ನೀಡುವ ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಹಾಗೂ ಕಾಂಗ್ರೆಸ್‌ನ ಸುನೀಲ್ ಬೋಸ್ ಮುಖಾಮುಖಿಯಾದರೂ ಇಬ್ಬರು ಮಾತನಾಡಲಿಲ್ಲ. ಬಿಜೆಪಿ ಕಾರ್ಯಕರ್ತರೊಂದಿಗೆ ಬಾಲರಾಜ್, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸುನೀಲ್ ಬೋಸ್ ರಥಕ್ಕೆ ಪೂಜೆ ಸಲ್ಲಿಸಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts