ಹೊಸಪೇಟೆ: ನಗರದಲ್ಲಿ ಸೋಮವಾರ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ನಗರದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ರೋಟರಿ ವೃತ್ತದವರೆಗೆ ರೈತ ಮುಖಂಡರ ರ್ಯಾಲಿ ನಡೆಯಿತು. ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಮಾತನಾಡಿ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಅಧಿವೇಶನಗಳಲ್ಲಿ ರೈತಪರ ಧ್ವನಿ ಎತ್ತಲಿಲ್ಲ. ಒಳ ಒಪ್ಪಂದಕ್ಕೆ ಒಳಗಾಗಿ ಐಎಸ್ಸಾರ್ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. 30 ಸಾವಿರ ರೈತರು ಹಾಗೂ ಕಾರ್ಮಿಕರು ಐದು ವರ್ಷಗಳಿಂದ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಟಿಎಸ್ಪಿ ಕಾರ್ಖಾನೆ ಮುಚ್ಚಿಸಿ ಜಿಂದಾಲ್ಗೆ ಸಹಕರಿಸುತ್ತಿದ್ದಾರೆ ಎಂದು ಆರೊಪಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಮಾತನಾಡಿದರು. ಸಿಐಟಿಯು ಹಿರಿಯ ಮುಖಂಡ ಆರ್.ಭಾಸ್ಕರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಮಹ್ಮದ್ ಇಮಾಮ್ ನಿಯಾಜಿ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಸಣ್ಣಕ್ಕಿ ರುದ್ರಪ್ಪ, ಕಾಕುಬಾಳ ಜಡಿಯಪ್ಪ, ತಾಯಪ್ಪ ನಾಯಕ, ನಾಗರತ್ನಮ್ಮ, ವಿಜಯಲಕ್ಷ್ಮೀ, ಅಬ್ದುಲ್ ಸಾಬ್, ನಿಂಬಗಲ್ ರಾಮಕೃಷ್ಣ, ಲಿಯಾಖತ್ ಅಲಿ, ಯಲ್ಲಾಲಿಂಗ ಇತರರು ಪಾಲ್ಗೊಂಡಿದ್ದರು.