ಚಿತ್ರದುರ್ಗ: ರಾಜ್ಯದ ಲಕ್ಷಕ್ಕೂ ಅಧಿಕ ರೈತರು 5 ಕೋಟಿಗಿಂತ ಹೆಚ್ಚಿನ ಗಂಧದ ಮರ ಬೆಳೆಸಿದ್ದು, ಐದಾರು ವರ್ಷದ ಮರಗಳನ್ನು ಕಳ್ಳತನ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದ್ದು, ಕೂಡಲೇ ರಕ್ಷಣೆಗೆ ಅಗತ್ಯ ಕ್ರಮವಹಿಸುವಂಗತೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ರಾಜ್ಯ ಉಪಾಧ್ಯಕ್ಷ ಯು.ಶರಣಪ್ಪ ಆಗ್ರಹಿಸಿದ್ದಾರೆ.
ಶ್ರೀಗಂಧ ಮರಗಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಪ್ರಕರಣ ದಾಖಲಿಸಿದರೂ ಪರಿಣಾಮಕಾರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದೂರು ನೀಡುವ ವೇಳೆ ಅರಣ್ಯ ಇಲಾಖೆ ಕಾಯ್ದೆಯ ಕಲಂ 86ರ ಅಡಿ ಪ್ರಕರಣ ದಾಖಲು ಮಾಡಿದರೆ ತಪ್ಪಿತಸ್ಥರಿಗೆ ಕನಿಷ್ಠ 7 ವರ್ಷ ಕಠಿಣ ಸಜೆಯಾಗಲಿದೆ. ಹೀಗಾಗಿ ಕಳ್ಳತನ ಮಾಡಿದವರಷ್ಟೇ ಅಲ್ಲ, ಖರೀದಿಸಿದವರನ್ನು ಆರೋಪಿಯನ್ನಾಗಿಸಿ ಬಂಧಿಸಬೇಕು. ಆಧುನಿಕ ತಂತ್ರಜ್ಞಾನ ಬಳಸಿ, ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಾನೂನು ಚೌಕಟ್ಟಿನೊಳಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಐದಾರು ಕಡೆ ಕಳ್ಳತನವಾಗಿದ್ದು, ಬೆಳೆಗಾರರಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ಸೇರಿ ಇತರೆ ಸೌಲಭ್ಯ ಅಳವಡಿಸಿಲು ನಬಾರ್ಡ್ ಅನ್ನು ಸಂಪರ್ಕಿಸಿದ್ದು, ಸ್ಪಂದಿಸಿದ್ದಾರೆ. ಸರ್ಕಾರ ಕೂಡ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಶ್ರೀಗಂಧ ಬೆಳೆಗಾರರ ಸಮಸ್ಯೆ ಆಲಿಸಲು ಪ್ರತಿ 3 ತಿಂಗಳಿಗೊಮ್ಮೆ ಡಿಸಿ, ಎಸ್ಪಿ ನೇತೃತ್ವದಲ್ಲಿ ಸಭೆ ಕರೆಯಬೇಕು. ಕಳ್ಳತನ ಪ್ರಕರಣ ಬೇಧಿಸಲು ಮರಗಳಿಗೂ ಡಿಎನ್ಎ ಪರೀಕ್ಷೆ ಮಾಡಿಸಬೇಕು. ರಾಜ್ಯಮಟ್ಟದಲ್ಲಿ ಮೇಲುಸ್ತುವಾರಿಗಾಗಿ ಎಸ್ಐಟಿ ವಿಶೇಷ ತಂಡ ರಚಿಸಬೇಕು ಎಂದು ಮನವಿ ಮಾಡಿದರು.
ರೈತ ಎಂ.ಎಚ್.ಸತೀಶ್ಕುಮಾರ್ ಮಾತನಾಡಿ, ಸರ್ಕಾರದ ವಿವಿಧ ಕಾಮಗಾರಿ ಅನುಷ್ಠಾನಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ವೇಳೆ ತೆಂಗು, ಅಡಕೆ, ಮಾವು, ಶ್ರೀಗಂಧ ಇತರೆ ಮರಗಳನ್ನು ಕಡಿದಾಗ ರಾಜ್ಯದ ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಡಳಿತ ಇಲಾಖೆಗಳ ಮೂಲಕ ಪರಿಶೀಲಿಸಿ ವೈಜ್ಞಾನಿಕ ಪರಿಹಾರ ನೀಡುತ್ತಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮೊತ್ತ ನೀಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ದಿನೇಶ್, ದಯಾನಂದಮೂರ್ತಿ, ಚೌಡಯ್ಯ, ರಾಮಣ್ಣ, ಪ್ರಕಾಶ್ ಇತರರಿದ್ದರು.
ಮಗ್ಶಾಟ್ (ಸಿಟಿಡಿ 20 ಶರಣಪ್ಪ )