ಕೈಮೂರ್ (ಬಿಹಾರ): ನಮ್ಮ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ ಎಂದು ಬಿಹಾರ ಕೃಷಿ ಸಚಿವ ಸುಧಾಕರ ಸಿಂಗ್ ಹೇಳಿಕೆ ನೀಡಿದ್ದು, ಈ ಹೇಳಿಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪೇಚಿಗೆ ಸಿಲುಕಿಸಿದೆ.
ಬಿಹಾರದ ಕೈಮೂರ್ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಸಚಿವ ಸಿಂಗ್, ತಮ್ಮದೇ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ನಾನು ಸಚಿವನಾಗಿರುವ ಕೃಷಿ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದು, ನಾನು ಆ ಕಳ್ಳರ ಸರ್ದಾರ್, ನನ್ನ ಮೇಲೆ ಇನ್ನೂ ಅನೇಕ ನಾಯಕರು ಇದ್ದಾರೆ’ ಎಂದರು. ಬಿಜೆಪಿ ತೊರೆದು ಕಾಂಗ್ರೆಸ್ ಮತ್ತು ಆರ್ಜೆಡಿ ಜತೆ ಮೈತ್ರಿ ಮಾಡಿಕೊಂಡಿರುವ ನಿತೀಶ್ಕುಮಾರ್ಗೆ ಈ ಹೇಳಿಕೆ ಭಾರಿ ಮುಜುಗರವನ್ನು ತಂದಿದೆ. ಜತೆಗೆ, ನಿತೀಶ್ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
‘ನಮ್ಮ ಕೃಷಿ ಇಲಾಖೆಯಲ್ಲಿ ಕಳ್ಳತನ ಮಾಡದೇ ಇರುವ ಒಂದೇ ಒಂದು ವಿಭಾಗವೂ ಇಲ್ಲ. ಸರ್ಕಾರ ಬದಲಾದರೂ ಸರ್ಕಾರದ ಕಾರ್ಯವೈಖರಿ ಮಾತ್ರ ಮೊದಲಿನಂತೆಯೇ ಇದೆ’ ಎಂದು ಸುಧಾಕರ ಸಿಂಗ್ ಆರೋಪಿಸಿದ್ದಾರೆ.
‘ಕೈಮೂರು ಜಿಲ್ಲೆಯಿಂದ ಇಬ್ಬರು ಸಚಿವರಿದ್ದಾರೆ. ಆದರೂ ಪರಿಸ್ಥಿತಿ ಬದಲಾಗಿಲ್ಲ. ಕೈಮೂರ್ ಜಿಲ್ಲೆ ಭ್ರಷ್ಟ ಅಧಿಕಾರಿಗಳಿಂದ ತುಂಬಿಹೋಗಿದೆ. ರೈತರಿಗೆ ಪರಿಹಾರ ನೀಡುವ ನೆಪದಲ್ಲಿ ಬಿಹಾರ ಬೀಜ ನಿಗಮವು 200 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದೆ’ ಎಂದು ಸಿಂಗ್ ಆರೋಪಿಸಿದರು. ‘ಒಬ್ಬರು ಸಚಿವರಿದ್ದಾರೆ. ಇವರು ಈ ಮೊದಲೂ ಸಚಿವರಾಗಿದ್ದರೂ, ಈಗಲೂ ಆಗಿದ್ದಾರೆ. ಇವರಿಂದಾಗಿ ಆಗಲೂ ಇದೇ ರೀತಿ ಭ್ರಷ್ಟತೆ ಇತ್ತು, ಈಗಲೂ ಏನೂ ಬದಲಾಗಲಿಲ್ಲ’ ಎಂದು ಅಲ್ಪಸಂಖ್ಯಾತರ ಇಲಾಖೆ ಸಚಿವ ಮೊಹಮ್ಮದ್ ಜಾಮಾ ಖಾನ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ಅಂದಹಾಗೆ, ಸುಧಾಕರ್ ಸಿಂಗ್, ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರ ಪುತ್ರ. ಇವರು ಬಕ್ಸರ್ನ ರಾಮಗಢ ಕ್ಷೇತ್ರದ ಶಾಸಕ. 2013ರಲ್ಲಿ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗಿದ್ದಾಗ ಇವರ ವಿರುದ್ಧ ಅಕ್ಕಿ ಹಗರಣದ ಆರೋಪ ಕೇಳಿ ಬಂದಿದ್ದವು. (ಏಜೆನ್ಸೀಸ್)
ನಿತೀಶ್ಕುಮಾರ್ಗೆ ಬಿಗ್ ಶಾಕ್: ಭ್ರಷ್ಟರಿಗೆ ಸಾಥ್ ನೀಡಿದ್ದು ಸಹಿಸಲ್ಲ ಎಂದು ಕಮಲದ ಕೈಹಿಡಿದ 15 ಮಂದಿ!
ಕಚೇರಿಯಲ್ಲಿ ಎಲ್ರೂ ಮಾಡೋದು ಅದೇ ಕೆಲ್ಸ, ಭೇದಭಾವ ಸಹಿಸಲು ಆಗ್ತಿಲ್ಲ… ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ!