ಲಂಡನ್: ಬಸವೇಶ್ವರರ 889ನೇ ಜನ್ಮದಿನವನ್ನು ಲಂಡನ್ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತೀಯ ಹೈಕಮಿಷನರ್ ಗಾಯಿತ್ರಿ ಇಸ್ಸಾರ್ ಕುಮಾರ್ ಅವರು ಬಸವೇಶ್ವರ ಪ್ರತಿಮೆ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2015ರ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಸವೇಶ್ವರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ದಿನದಿಂದ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ವತಿಯಿಂದ ಈ ಇಬ್ಬರು ಮಹಾನುಭಾವರ ಜಯಂತಿಯನ್ನು ಏಕಕಾಲದಲ್ಲಿ ಆಚರಿಸುತ್ತಿದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರು. ಆದರೆ ಪ್ರಕಟಣೆಯ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದ ಸಚಿವರು, ಬಸವ ಮತ್ತು ಅಂಬೇಡ್ಕರ್ ಇಬ್ಬರೂ ಸಮಾನತೆಯ ಹರಿಕಾರರು. ಇಬ್ಬರ ಕಾಲಾವಧಿಗಳು ಬೇರೆ ಬೇರೆ ಇದ್ದರೂ ಅವರ ಧ್ಯೇಯ ಮತ್ತು ಆಶಯಗಳು ಒಂದೇ ಆಗಿದ್ದವು. ಈ ಇಬ್ಬರೂ ಚೇತನಗಳು ಭಾರತಕ್ಕೆ ಮಾತ್ರವೇ ಸೇರದೇ ವಿಶ್ವಪಥದಲ್ಲಿ ಸಾಗಿದವರು. ಅಂಥ ಮಹಾನ್ ಹರಿಕಾರರ ಸ್ಮರಣೆಯಲ್ಲಿ ಲಂಡನ್ನಿನ ಆಚರಿಸುತ್ತಾ ಬಂದಿರುವುದು ಶ್ಲಾಘನಾರ್ಹ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ಮೂಲದ ಕನ್ನಡ ಸಂಘಟನೆಗಳಾದ ಕನ್ನಡ ಬಳಗ ಮತ್ತು ಕನ್ನಡಿಗ ಸಂಘಟನೆ ಯುಕೆ ಮುಖ್ಯಸ್ಥರಾದ ಡಾ.ಸ್ನೇಹಾ ಕುಲಕರ್ಣಿ ಮತ್ತು ಶ್ರೀ ಗಣಪತಿ ಭಟ್ ಉಪಸ್ಥಿತರಿದ್ದರು.
ಬಸವೇಶ್ವರ ಪ್ರತಿಮೆಯು ಇಂಗ್ಲೆಂಡ್ನಲ್ಲಿ ಭಾರತದ ಪ್ರಧಾನಿಯಿಂದ ಅನಾವರಣಗೊಂಡ ಮೊದಲ ಪ್ರತಿಮೆಯಾಗಿದೆ ಮತ್ತು ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಯಾಗಿದೆ. 1921 ರಿಂದ 1922 ರವರೆಗೆ ಲಂಡನ್ನಲ್ಲಿ ಅಂಬೇಡ್ಕರ್ ಅವರು ಉನ್ನತ ಶಿಕ್ಷಣವನ್ನು ಪಡೆಯುವಾಗ ವಾಸಿಸುತ್ತಿದ್ದ ಅಂಬೇಡ್ಕರ್ ಹೌಸ್ ಅನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ ಎಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಲಂಡನ್ ಬರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.