ಹುಬ್ಬಳ್ಳಿ: ಏಳು ಮೃತದೇಹಗಳ ಶವ ಪರೀಕ್ಷೆಗೆಂದು ಶುಕ್ರವಾರ ಬೆಳಗ್ಗೆ ಕಿಮ್ಸ್ಗೆ ತರಲಾಗಿತ್ತು. ಆ ವೇಳೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆಂಬುಲೆನ್ಸ್ನಲ್ಲಿ ಒಂದರ ಮೇಲೆ ಒಂದು ಮೃತದೇಹ ತುಂಬಿಕೊಂಡು ತರಲಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ಹೆಸರು ನೋಂದಾಯಿಸಿ ಪತ್ರ ತಂದರೆ ಮಾತ್ರ ಶವಾಗಾರಕ್ಕೆ ಸಾಗಿಸಲಾಗುವುದು ಎಂದು ಶವಾಗಾರ ಸಿಬ್ಬಂದಿ ತಿಳಿಸಿದ್ದರಿಂದ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ಜರುಗಿತು. ಈ ವೇಳೆ ಡಿಸಿಪಿ ಆರ್.ಬಿ. ಬಸರಗಿ ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಪೊಲೀಸರೇ ಮೃತದೇಹಗಳನ್ನು ಎತ್ತಿ ಶವಾಗಾರಕ್ಕೆ ರವಾನಿಸಿದರು.
ನಂತರ ಮೃತರ ಕುಟುಂಬದವರು ದಾವಣಗೆರೆಯಿಂದ ಆಗಮಿಸಿ ಮೃತದೇಹ ಗುರುತು ಪತ್ತೆ ಹಚ್ಚಿದರು. ರಕ್ತಸಿಕ್ತ ಮೃತದೇಹ ಕಂಡ ಕೂಡಲೇ ಸಂಬಂಧಿಕರ ಆಕ್ರಂದನ ಹೆಚ್ಚಾಗಿತ್ತು. ಪೊಲೀಸರು ಸಂಬಂಧಿಕರನ್ನು ಸಮಾಧಾನಪಡಿಸಿ ಶವ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರಿಸಿದರು.
ಕಣ್ಣೀರಿಟ್ಟ ಪತಿ, ಮಕ್ಕಳು: ಬೆಳ್ಳಂಬೆಳಗ್ಗೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮೃತರ ಕುಟುಂಬಸ್ಥರು ಧಾವಿಸಿದರು. ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಕಳೆದುಕೊಂಡ ಮಕ್ಕಳು, ಪತ್ನಿ ಕಳೆದುಕೊಂಡ ಪತಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುವಂತಿತ್ತು.
ಮೃತ್ಯುಕೂಪವಾದ ಬೈಪಾಸ್
ಹುಬ್ಬಳ್ಳಿ ಗಬ್ಬೂರ್ ಕ್ರಾಸ್ನಿಂದ ಧಾರವಾಡ ನರೇಂದ್ರ ಕ್ರಾಸ್ವರೆಗಿನ ಸುಮಾರು 28 ಕಿಮೀ ಬೈಪಾಸ್ ರಸ್ತೆಯಲ್ಲಿ ಪದೇ ಪದೆ ಅಪಘಾತಗಳಾಗಿವೆ. ದ್ವಿಪಥ ಇರುವುದೇ ಇದಕ್ಕೆ ಕಾರಣ. 2020 ಜ. 14ರಂದು ಟೆಂಪೋ ಹಾಗೂ ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ 2 ವರ್ಷದ ಮಗು ಸೇರಿ ಕೊಪ್ಪಳ ಮೂಲದ ಒಂದೇ ಕುಟುಂಬದ ನಾಲ್ವರು ಇದೇ ಬೈಪಾಸ್ನಲ್ಲಿ ಮೃತಪಟ್ಟಿದ್ದರು. ಇದಾದ ಕೆಲ ದಿನಗಳಲ್ಲೇ (ಜ. 26) ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದರು. ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿದೆ.
ಪ್ರತಿ ಸಂಕ್ರಾಂತಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಈ ಬಾರಿ ಗೋವಾಕ್ಕೆ ತೆರಳುತ್ತಿದ್ದರು. ಅತ್ತಿಗೆ ಪ್ರೀತಿ ರವಿಕುಮಾರ ಸಹ ತೆರಳಿದ್ದರು. ಅವರು ಎಂದಿಗೂ ರಾತ್ರಿ ಪ್ರಯಾಣ ನಡೆಸುತ್ತಿದ್ದಿಲ್ಲ. ನಮ್ಮ ದುರಾದೃಷ್ಟ.
| ಅರವಿಂದ
(ಮೃತ ಪ್ರೀತಿ ರವಿಕುಮಾರ ಅವರ ಮೈದುನ)
ನಾವೆಲ್ಲ ಬಾಲ್ಯ ಸ್ನೇಹಿತರು. ಗೋವಾದಲ್ಲಿ ರೆಸಾರ್ಟ್ ಸಹ ಬುಕ್ ಮಾಡಲಾಗಿತ್ತು. ಧಾರವಾಡದಲ್ಲಿನ ನಮ್ಮ ಸಂಬಂಧಿಯ ಫಾಮ್ರ್ ಹೌಸ್ನಲ್ಲಿ ಉಪಹಾರ ಸೇವಿಸಿ ಗೋವಾಕ್ಕೆ ಹೋಗಲು ನಿರ್ಧರಿಸಿದ್ದೇವು. ಧಾರವಾಡ ಬಳಿ ಇದ್ದಾಗ ಅವರಿಗೆ ಫೋನ್ ಮಾಡಿ ನಿದ್ದೆಗೆ ಜಾರಿದ್ದೆ. ಎಚ್ಚರವಾದಾಗ ಅಪಘಾತ ಸಂಭವಿಸಿತ್ತು. ನಾನು ಕೊನೆ ಸೀಟ್ನಲ್ಲಿ ಕುಳಿತಿದ್ದೆ.
| ಆಶಾ ಜಗದೀಶ (ಗಾಯಾಳು)