ಮಂಗಳೂರು: ಕುಲಶೇಖರ ಸುರಂಗ ಮಾರ್ಗದ ಸಮೀಪ ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು ರೈಲು ಸಂಚಾರ ಭಾನುವಾರ ಬೆಳಗ್ಗೆ ಪುನರಾರಂಭಗೊಂಡಿದೆ.
ಭಾನುವಾರ ಮುಂಜಾನೆ ನಾಲ್ಕು ಗಂಟೆಗೆ ಗೂಡ್ಸ್ ರೈಲು ಹಾಗೂ 8 ಗಂಟೆಗೆ ಎರ್ನಾಕುಳಂ-ಅಜ್ಮೇರ್ ರೈಲು ಸಂಚರಿಸಿದ್ದು ಯಾವುದೇ ತೊಂದರೆಯಾಗಿಲ್ಲ. ಸ್ಥಳದಲ್ಲಿ ಹಾಜರಿದ್ದ ರೈಲು ಅಧಿಕಾರಿಗಳು ನಿಗಾ ವಹಿಸಿದ್ದರು. ಗಂಟೆಗೆ 10 ಕಿ.ಮೀ ವೇಗದೊಂದಿಗೆ ರೈಲು ಎಚ್ಚರಿಕೆಯಿಂದ ಸಾಗಿದ್ದು ಅಧಿಕಾರಿಗಳು ಹಳಿಯನ್ನು ಸಾಮಾನ್ಯ ರೈಲು ಸಂಚಾರಕ್ಕೆ ಯೋಗ್ಯ ಎಂದು ಅಧಿಕೃತಗೊಳಿಸಿದರು.
ಶುಕ್ರವಾರ ಬೆಳಗ್ಗೆ ತೀವ್ರ ಮಳೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿದು ರೈಲು ಹಳಿಯ ಮೇಲೆ ಬಿದ್ದಿತ್ತು. ಪಾಲ್ಘಾಟ್ ವಿಭಾಗದ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ದುರಸ್ತಿ ಕೆಲಸ ನಿರಂತರವಾಗಿ ನಡೆದಿದ್ದು ಭಾನುವಾರ ಮುಂಜಾನೆಗೆ ಕೆಲಸ ಪೂರ್ಣಗೊಂಡಿದೆ. ಆ ಹಿನ್ನೆಲೆಯಲ್ಲಿ ರೈಲು ಸಂಚಾರ ಪುನರಾರಂಭಿಸಲಾಗಿದೆ.