ಉತ್ತರಪ್ರದೇಶ: ಕಾಂಗ್ರೆಸ್ ನಾಯಕರಾಗಿರುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅಂತೂ ಇಂತೂ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಕೊನೆಗೂ ಹತ್ರಾಸ್ಗೆ ತಲುಪಿದ್ದಾರೆ.
ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಮನೆಗೆ ಭೇಟಿ ನೀಡುವ ಸಲುವಾಗಿ ಬೆಳಗ್ಗೆ ನವದೆಹಲಿಯಿಂದ ಹೊರಟಿದ್ದ ಇವರನ್ನು ಮಾರ್ಗಮಧ್ಯೆ ತಡೆಯುವ ಪ್ರಯತ್ನ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಮಧ್ಯಾಹ್ನ ರಾಹುಲ್-ಪ್ರಿಯಾಂಕಾ ಹಾಗೂ ಕಾಂಗ್ರೆಸ್ನ ಇತರ ಕೆಲವು ನಾಯಕರಿದ್ದ ವಾಹನವನ್ನು ಪೊಲೀಸರು ತಡೆಹಿಡಿದಿದ್ದರು. ಪರಿಣಾಮ ಸುಮಾರು ಹತ್ತು ಕಿ.ಮೀ.ನಷ್ಟು ದೂರ ಅಂದಾಜು ಒಂದು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು.
ಆದರೆ ಪಟ್ಟು ಬಿಡದ ರಾಹುಲ್-ಪ್ರಿಯಾಂಕಾ ಹಾಗೂ ಇನ್ನು ಮೂವರು ಸೇರಿ ಒಟ್ಟು ಐವರಷ್ಟೇ ಸಂತ್ರಸ್ತೆಯ ಮನೆಗೆ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು. ‘ಏನೇ ಆದರೂ ಹತ್ರಾಸ್ಗೆ ಹೋಗೇ ಹೋಗ್ತೀನಿ’ ಎಂದು ಬೆಳಗ್ಗೆ ನವದೆಹಲಿಯಿಂದ ಹೊರಡುವಾಗಲೇ ಪ್ರಿಯಾಂಕಾ ಹೇಳಿದ್ದರು.
ಇದನ್ನು ಓದಿ: Video | ಏನೇ ಆದ್ರೂ ಹತ್ರಾಸ್ಗೆ ಹೋಗೇ ಹೋಗ್ತೀನಿ: ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲ್
ರಾಹುಲ್ ಹಾಗೂ ಪ್ರಿಯಾಂಕಾ ಗುರುವಾರವೇ ಹತ್ರಾಸ್ಗೆ ಭೇಟಿ ನೀಡಲು ಯತ್ನಿಸಿದ್ದರೂ ಪೊಲೀಸರು ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ವಾಹನ ತಡೆದರೂ ಕಾಲ್ನಡಿಗೆಯಲ್ಲಿ ತೆರಳಿದ ರಾಹುಲ್ಗೆ ಪೊಲೀಸರು ಮತ್ತೆ ತಡೆವೊಡ್ಡಿದ್ದರು. ಈ ಸಂದರ್ಭ ತಳ್ಳಾಟ ನಡೆದಿದ್ದು, ರಾಹುಲ್-ಪ್ರಿಯಾಂಕಾ ಅಂದು ವಾಪಸ್ ಆಗಿದ್ದರು. (ಏಜೆನ್ಸೀಸ್)