ಬೆಂಗಳೂರು: ಶಾಲಾ ಶುಲ್ಕ ಕಡಿತ ಮತ್ತು ಶಿಕ್ಷಣ ಇಲಾಖೆಯ ವೈಫಲ್ಯಗಳನ್ನು ಖಂಡಿಸಿ ಖಾಸಗಿ ಶಾಲೆಗಳ ಒಕ್ಕೂಟವು ರಾಜ್ಯ ರಾಜಧಾನಿಯಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಫ್ರೀಡಂ ಪಾರ್ಕ್ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೈಸೂರು, ಶಿವಮೊಗ್ಗ, ಬಳ್ಳಾರಿ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂ. ಗ್ರಾಮಾಂತರ, ಬೆಂ. ನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಆಗಮಿಸಿದ್ದು, 2000ಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಶಿಕ್ಷಣ ಸಂಸ್ಥೆ, ಶಿಕ್ಷಕರು ಎಲ್ಲಾ ಸೇರಿ ಹೋರಾಟ ಮಾಡ್ತಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗ್ತಿದೆ. ಆರ್ಟಿ ಮರುಪಾವತಿ ಆಗಿಲ್ಲ. ಶಿಕ್ಷಣ ಸಚಿವರೇ, ನಿಮ್ಮ ಅಧಿಕಾರಿಗಳು ನಿಮ್ಮನ್ನು ತಪ್ಪು ದಾರಿಗೆ ಕೊಂಡೋಗ್ತಿದ್ದಾರೆ. ಅರ್ಧ ಭಾಗ ಇನ್ನೂ ಪಾವತಿ ಆಗಿಲ್ಲ. ಮೇ ಇಂದ ಇದುವರೆಗೂ ಶಿಕ್ಷಕರು ಕಣ್ಣಲ್ಲಿ ನೀರು ಹಾಕಿಕೊಂಡು ಆನ್ಲೈನ್ ಕ್ಲಾಸ್ ಮಾಡಿದ್ದಾರೆ. ಶಿಕ್ಷಣ ಸಚಿವರು ಶಿಕ್ಷಕರಿಗೆ ಹಾಗೂ ಸಂಸ್ಥೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಆಗ್ರಹಿಸಿದರು.
ನಾವು ಮಕ್ಕಳ ಜೊತೆಗೂ ಇದ್ದೇವೆ. ನಮಗೆ ಮಕ್ಕಳ ಬಗ್ಗೆ ಕಾಳಜಿ ಇದೆ. ಅವರಿಗೆ ಶಿಕ್ಷಣ ಸಿಗಲೇಬೇಕು, ಅದರ ಮನವರಿಕೆ ನಮಗಿದೆ. ಇವತ್ತು ಮಾಧ್ಯಮಗಳಿಂದ ಶಿಕ್ಷಣ ಕ್ಷೇತ್ರ ಒಂದಾಗ್ತಿದೆ. ನಮಗೆ ಪೋಷಕರ ಮೇಲೆ ಯಾವ ದ್ವೇಷವೂ ಇಲ್ಲ. ನಮಗೆ ಅವರೂ ಬೇಕು, ಅವರ ವಿರುದ್ಧ ನಾವಲ್ಲ. ನಮ್ಮ ಸಮಸ್ಯೆ ಬಗ್ಗೆಯೂ ಅವರು ಅರ್ಥ ಮಾಡ್ಕೋಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ರ್ಯಾಲಿ, ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ, ಫ್ರೀಡಂ ಪಾರ್ಕ್ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.