ಚಿತ್ರದುರ್ಗ: ಒಂದೇ ದಿನದಲ್ಲಿ ಎಲ್ಲರ ಮನಸು ಶಿವಮಯ ಆಗುವುದಿಲ್ಲ. ಅದಕ್ಕೆ ಪೂರ್ವಸಿದ್ಧತೆ ಅಗತ್ಯವಿದ್ದು, ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಸಜ್ಜುಗೊಳಿಸುವ ಕೆಲಸವಾಗಬೇಕು. ಈ ಪ್ರಕ್ರಿಯೆಯಲ್ಲಿ ಅಂತರಂಗ ಶುದ್ಧಿ ಕೂಡ ಅಷ್ಟೇ ಮುಖ್ಯ ಎಂದು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹದ ಅಂಗವಾಗಿ ಮಂಗಳವಾರ ಚಾಲನೆಗೊಂಡ 93ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದಲ್ಲಿ ನೂತನ ಗುರು ಸದನ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವ-ಪಾರ್ವತಿ ಕಲ್ಯಾಣವಾದ ದಿನವನ್ನು ಶಿವರಾತ್ರಿಯಾಗಿ ಆಚರಿಸುವ ಪರಂಪರೆ ಬೆಳೆದು ಬಂದಿದೆ. ಸತ್ಯದ ಅರಿವು, ಜ್ಞಾನಾರ್ಜನೆಯೆಂಬ ಗ್ರಂಥದ ಅಧ್ಯಯನ ಆಗಬೇಕು. ತಪಸ್ಸಿನ ರೀತಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಸ್ವಚ್ಛಗೊಳಿಸುವ ಕೆಲಸವಾಗಬೇಕು. ಮಂಗಳಕರವಾದ ಶಿವನಾಮ ಸ್ಮರಣೆಯೊಂದಿಗೆ ಶಿವರಾತ್ರಿಯ ಏಳು ದಿನದೊಳಗೆ ಮಲೀನ ತೊಲಗಿಸಬೇಕು ಎಂದು ಕಿವಿಮಾತು ಹೇಳಿದರು.
ಬೀದರ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಸಭಾಮಂಟಪ ಉದ್ಘಾಟಿಸಿ ಮಾತನಾಡಿ, ನಾಳಿನ ರಾತ್ರಿ ಶಿವನಿಗಾಗಿ ಮೀಸಲಿಡುವುದು ಶ್ರೇಷ್ಠ. ವರ್ಷವಿಡಿ ಪೂಜೆ ಮಾಡುವುದಕ್ಕಿಂತ ಶಿವರಾತ್ರಿಯಲ್ಲಿ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ಶಿವ ಪುರಾಣದಲ್ಲಿ ಶಿವರಾತ್ರಿ ಮಹಾತ್ಮೆ ಕುರಿತು ಮಾಹಿತಿ ಇದೆ. ದಾನ ಕೂಡ ಕಷ್ಟದಲ್ಲಿರುವವರಿಗೆ ಸಮಯಕ್ಕೆ ಸರಿಯಾಗಿ ಮಾಡಿದಾಗ ಮಹಾರುದ್ರನ ಅನುಗ್ರಹವಾಗಲಿದೆ. ಸಿದ್ಧಾರೂಢ ಪರಂಪರೆ ದೇಶದ ವಿವಿಧ ರಾಜ್ಯಗಳಲ್ಲಿ ಇದ್ದು, ಚಿತ್ರದುರ್ಗದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವ ಕಾಯಕವನ್ನು ಶಿವಲಿಂಗಾನಂದ ಸ್ವಾಮೀಜಿ ಮಾಡುತ್ತ ಭಕ್ತರಲ್ಲಿ ಜಾಗೃತಿ ಮೂಡಿಸುತ್ತಿರುವುದು ಮೆಚ್ಚುವಂಥದ್ದು ಎಂದು ಬಣ್ಣಿಸಿದರು.
ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಂಡರೆ ವಿಶ್ವವನ್ನೇ ಅರಿತಂತೆ. ಸನ್ಮಾರ್ಗದಲ್ಲಿ ಸಾಗುವ ಮೂಲಕ ಶಿವಕೃಪೆಗೆ ಪಾತ್ರವಾಗಬೇಕು ಎಂದರು.
ಇದೇ ವೇಳೆ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶ್ರೀಧರ್ ಭಜಂತ್ರಿ, ಆದಿಚುಂಚನಗಿರಿ ಗೋಶಾಲೆಗೆ ಉಚಿತ ಮೇವು ದಾನಿಗಳಾದ ಸಂಜೀವಪ್ಪ, ಅಬ್ಬಣ್ಣ, ಪ್ರಭು, ಆನಂದಪ್ಪ, ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮೈಸೂರಿನ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶಿರೋಳ್ ಶ್ರೀ ಶಂಕರಾರೂಢ ಸ್ವಾಮೀಜಿ, ಬೆಂಗಳೂರಿನ ಶ್ರೀ ಪ್ರಕಾಶನಾಥ ಸ್ವಾಮೀಜಿ, ಬಾದಾಮಿಯ ಶ್ರೀ ಕೈಲಾಸನಾಥ ಸ್ವಾಮೀಜಿ, ಬೀದರ್ ಶ್ರೀ ಗಣಪತಿ ಮಹಾರಾಜ್ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಅನಿತ್ಕುಮಾರ್, ವಿಎಚ್ಪಿ ಓಂಕಾರ್, ಮೊದಲ ದಿನದ ದಾಸೋಹ ಸೇವಾಕರ್ತರಾದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಜಿ.ಮೂಡಲಗಿರಿಯಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ಪಾರ್ಥಸಾರಥಿ ರೆಡ್ಡಿ, ಭೀಮಯ್ಯ ಇತರರಿದ್ದರು.
ಸಂಸ್ಕೃತ ಶಿಕ್ಷಕ ಸುಬ್ರಾಯ್ ಭಟ್ ವೇದಘೋಷ ಮೊಳಗಿಸಿದರು. ಗಾನಯೋಗಿ ಸಂಗೀತ ಪರಿಷತ್ ತಂಡದಿಂದ ಗೀತಗಾಯನ, ಲಾಸಿಕ ಫೌಂಡೇಶನ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.
ಭಾರತಮಾತೆ ವೈಭವ ವರ್ಣಿಸಲು ಸಾಧ್ಯವಿಲ್ಲ
ಹಿಂದು ರಾಜ ವಂಶಸ್ಥರ ಪರಂಪರೆ ಅಚ್ಚಳಿಯದೆ ಇತಿಹಾಸದ ಪುಟಗಳಲ್ಲಿ ಉಳಿದಿದೆ. ಮದಿಸಿದ ಆನೆಯನ್ನು ಪಳಗಿಸಿದ ಚಿತ್ರದುರ್ಗದ ಒಂಟಿ ಸಲಗ ಮದಕರಿನಾಯಕರ ಶೌರ್ಯ ಎಂದಿಗೂ ಮರೆಯುವಂತಿಲ್ಲ ಎಂದು ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಭಾರತ ಮಾತೆ ಇಲ್ಲಿಗೆ ಮಾತ್ರವಲ್ಲ, ವಿಶ್ವಕ್ಕೆ ತಾಯಿಯಾಗಿದ್ದಾಳೆ. ಗುರು, ಲಿಂಗ, ಜಂಗಮರನ್ನು ಒಳಗೊಂಡು ಪ್ರತಿಯೊಬ್ಬರಲ್ಲೂ ಆ ದೇವಿ ಇದ್ದಾಳೆ. ಈಶ್ವರ, ದುರ್ಗೆ, ಲಕ್ಷ್ಮೀ, ಸರಸ್ವತಿ ಬೇರೆಯಲ್ಲ. ್ಭಾರತಮಾತೆ ಬೇರೆಯಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆಕೆಯ ವೈಭವ ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು.
ಗಡಿಯಲ್ಲಿ ದೇಶ ಕಾಯುವ ಯೋಧರು ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದರು. ರಾಷ್ಟ್ರಕ್ಕಾಗಿ ಬಲಿದಾನ ಆಗುವ ಸೈನಿಕರಿಗೆ ಭಾರತರತ್ನ ದೊರೆಯಬೇಕು ಎಂದು ಒತ್ತಾಯಿಸಿದರು.