ಬೆಂಗಳೂರು: ‘ರೆಬೆಲ್ ಸ್ಟಾರ್’ ಅಂಬರೀಶ್ ಅಭಿನಯದ ಕೊನೆಯ ಚಿತ್ರ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ, ಆ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಿರಲಿಲ್ಲ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ಹೋಗ್ತಾರಾ ‘ಹಳ್ಳಿ ಹಕ್ಕಿ’ ವಿಶ್ವನಾಥ್?
ಈಗ ಗುರುದತ್ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಪ್ರಜ್ವಲ್ ಅಭಿನಯದ ಚಿತ್ರವೊಂದನ್ನು ಗುರುದತ್ ನಿರ್ದೇಶಿಸುತ್ತಿದ್ದು, 2021ರ ಜನವರಿ ಮೊದಲ ವಾರದಲ್ಲಿ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಲಿದೆ.
ಪ್ರಜ್ವಲ್ ಚಿತ್ರಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಾಗಲಿದೆ ಎನ್ನುವ ಗುರುದತ್, ಮಾನವ ಕಳ್ಳಸಾಗಾಣಿಕೆ ಕುರಿತಾಗಿ ಈ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಎಂದು ಹೇಳಬಯಸುವ ಅವರು, ಈ ಚಿತ್ರದಲ್ಲಿ ಪ್ರಜ್ವಲ್ ಅವರನ್ನು ವಿಭಿನ್ನ ತೋರಿಸುವುದಕ್ಕೆ ಹೊರಟಿದ್ದಾರಂತೆ.
‘ಪ್ರಜ್ವಲ್ ಪಾಲಿಗೆ ಇದೊಂದು ವಿಭಿನ್ನ ಸಿನಿಮಾ. ಇದುವರೆಗೂ ಮಾಡದಿರುವ ಒಂದು ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರ ಫೋಟೋಶೂಟ್ ನಡೆಯಲಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಚನೆ ಇದೆ. ಸದ್ಯಕ್ಕೆ ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ’ ಎನ್ನುತ್ತಾರೆ ಗುರುದತ್.
ಇದನ್ನೂ ಓದಿ: ಡ್ರಗ್ಸ್ನಿಂದ ಟೈಗರ್ ಜತೆಗೆ ನಟಿಸೋ ಅವಕಾಶ ಕಳೆದುಕೊಂಡ ಸಾರಾ
ಈ ಚಿತ್ರವನ್ನು ಬೆಂಗಳೂರು ಕುಮಾರ್ ನಿರ್ಮಿಸುತ್ತಿದ್ದಾರೆ. ‘ಮುಂದಿನ ನಿಲ್ದಾಣ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುವ ಸಾಧ್ಯತೆ ಇದೆ.