ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಮಧ್ಯಾಹ್ನ ಮೈಸೂರು ಹೊರವಲಯದ ಕಡಕೊಳ ಬಳಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದ್ದು, ಗಾಯಗೊಂಡ ಪ್ರಹ್ಲಾದ್ರ ಮೊಮ್ಮಗ ಸೇರಿ ನಾಲ್ವರಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ವೈದ್ಯಾಧಿಕಾರಿ ಡಾ.ಮಧು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ 1.30ರ ವೇಳೆ ಮೋದಿ ಅವರ ಸಹೋದರ ಪ್ರಯಾಣಿಸುತ್ತಿದ್ದ ಕಾರು ಕಡಕೋಳ ಬಳಿ ಅಪಘಾತವಾಗಿದೆ. ತಕ್ಷಣ ಎಲ್ಲರಿಗೂ ತುರ್ತುಚಿಕಿತ್ಸೆ ನೀಡಲಾಗಿದೆ. ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದೆ. ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಹ್ಲಾದ್ ಮೋದಿ ಅವರ ಮುಖಕ್ಕೆ ಗಾಯವಾಗಿದೆ. ಚಿಕ್ಕಮಗುವಿನ ಕಾಲಿಗೆ ಫ್ರಾಕ್ಚರ್ ಆಗಿದೆ. ಸಂಜೆ ವೇಳೆಗೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ದೊಡ್ಡ ಅಪಘಾತವಾದ್ರು ದೇವರ ಆಶೀರ್ವಾದದಿಂದ ಅಪಾಯದಿಂದ ಪಾರಾಗಿದ್ದಾರೆ. ಇಂದು ಸಂಜೆ ಒಂದು ಬಾರಿ ಪರೀಕ್ಷೆ ನಡೆಸಲಾಗುವುದು. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಡಾ.ಮಧು ವಿವರಿಸಿದರು.
ಪ್ರಹ್ಲಾದ್ ಮೋದಿ ಮಾತನಾಡಿ, ಅಪಘಾತ ಆದ ವೇಳೆ ಜನರು ಮತ್ತು ಕಮಾಂಡೋಗಳು ಸಹಕಾರ ನೀಡಿದರು. ಆದಷ್ಟು ಬೇಗ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲೂ ನಮ್ಮನ್ನು ಮನೆಯವರಂತೆ ನೋಡಿಕೊಂಡರು. ಕರ್ನಾಟಕದ ಜನರ ಆಶೀರ್ವಾದದಿಂದ ಚೆನ್ನಾಗಿದ್ದೇವೆ. ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಅನ್ನೋ ಭಾವನೆ ಬಂದಿದೆ. ಮಾಧ್ಯಮದವರು ಅತಿಯಾಗಿ ಮಾಡದೆ ಒಳ್ಳೆ ಕೆಲಸ ಮಾಡಿದ್ದಾರೆ. ಕರ್ನಾಟಕದ ಬಿಜೆಪಿ ಹಾಗೂ ಪ್ರತಿಪಕ್ಷದವರು ಬಂದು ನನ್ನ ಯೋಗಕ್ಷೇಮ ವಿಚಾರಿಸಿದರು. ನರೇಂದ್ರ ಮೋದಿ ಅವರೂ ಆರೋಗ್ಯ ವಿಚಾರಿಸಿದರು. ದೇವರ ದಯೆಯಿಂದ ನಾವೆಲ್ಲಾ ಬದುಕುಳಿದೆವು. ನಾವು ಸೀಟ್ ಬೆಲ್ಟ್ ಹಾಕಿದ್ದ ಕಾರಣ ಏರ್ ಬ್ಯಾಗ್ ತೆರೆದುಕೊಂಡು ನಾವೆಲ್ಲಾ ಬದುಕಿದೆವು. ಪ್ರಯಾಣ ಮಾಡುವಾಗ ಎಲ್ಲರೂ ಸೀಟ್ ಬೆಲ್ಟ್ ಧರಿಸಿ ಎಂದು ಮನವಿ ಮಾಡಿದರು.