ನವದೆಹಲಿ: ಕಣ್ಣಿಗೆ ಕಾಣದ, ರೂಪ ಬದಲಿಸುವ ಕರೊನಾ ವೈರಸ್ಅನ್ನು ಎದುರಿಸುವ ಬಹುದೊಡ್ಡ ಅಸ್ತ್ರ ಎಂದರೆ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ಲಸಿಕೆ ಈ ನಿಟ್ಟಿನಲ್ಲಿ ಅತಿ ದೊಡ್ಡ ಸುರಕ್ಷಾ ಕವಚ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದೇಶದ ಜನರನ್ನುದ್ದೇಶಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ ಅವರು ಈ ವಿಷಯನ್ನು ತಿಳಿಸಿದರು. ಇದೊಂದು ಮಹಾಮಾರಿ. ಈ ಮಹಾಮಾರಿ ಆಧುನಿಕ ವಿಶ್ವ ನೋಡಿಲ್ಲ, ಅನುಭವಿಸಿಲ್ಲ. ಇಂಥ ಮಹಾಮಾರಿ ವಿರುದ್ಧ ಎಲ್ಲ ಒಂದಾಗಿ ಹೋರಾಡಿದ್ದೇವೆ. ಆಸ್ಪತ್ರೆ, ಲ್ಯಾಬ್ ಇತ್ಯಾದಿಗಳ ಹೊಸ ಆರೋಗ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಗಿದೆ. ಸೇನೆಗಳನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ. ಜಗತ್ತಿನ ಎಲ್ಲೇ ಏನೆಲ್ಲ ಇವೆಯೋ ಅದನ್ನೆಲ್ಲ ತರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕರೊನಾದಂಥ ಅದೃಶ್ಯ, ರೂಪ ಬದಲಿಸಿಕೊಳ್ಳುವಂಥ ಮಹಾಮಾರಿ ವಿರುದ್ಧ ಹೋರಾಡುವ ಅತಿದೊಡ್ಡ ಕೋವಿಡ್ ಮಾರ್ಗಸೂಚಿ. ಲಸಿಕೆ ಸುರಕ್ಷಾ ಕವಚ. ಇಷ್ಟು ವರ್ಷ ಬೇರೆ ದೇಶಗಳಲ್ಲಿ ಲಸಿಕೆ ತಯಾರಾದರೂ ಭಾರತದಲ್ಲಿ ತಯಾರಿ ಶುರುವಾಗುತ್ತಲೇ ಇರುತ್ತಿರಲಿಲ್ಲ. ಆದರೆ ನಾವು ಬಹುಬೇಗ ಲಸಿಕೆ ಕಂಡು ಹಿಡಿದೆವು ಎಂದರು. ಸದ್ಯ ದೇಶದಲ್ಲಿ 7 ಕಂಪನಿಗಳು ತೊಡಗಿಕೊಂಡಿವೆ. ಇನ್ನೂ ಮೂರು ಲಸಿಕೆ ತಯಾರಿ ನಡೆಯುತ್ತಿದೆ.ಬೇರೆ ದೇಶಗಳಿಂದಲೂ ತರಿಸಿಕೊಳ್ಳಲೂ ಚಿಂತಿಸಲಾಗುತ್ತಿದೆ. ಈ ಎಲ್ಲದರ ಮಧ್ಯೆ ಎರಡು ಲಸಿಕೆ ಪ್ರಯೋಗ ನಡೆಯುತ್ತಿದೆ. ಅದರಲ್ಲೂ ನಾಸಿಕ ಲಸಿಕೆ (ನೇಸಲ್ ವ್ಯಾಕ್ಸಿನ್) ತರಲು ಪ್ರಯೋಗಗಳು ನಡೆಯುತ್ತಿದ್ದು, ಅದು ಬಂದರೆ ಲಸಿಕೆ ಮೂಲಕ ಕರೊನಾ ತಡೆಯು ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ ಎಂದರು.