ಬೆಂಗಳೂರು: ನೋಂದಣಿಯಾಗದ ಶಾಲೆಗಳು, ಅನುಮತಿ ಪಡೆಯದೆ ಹೆಚ್ಚುವರಿ ತರಗತಿಗಳ ಆರಂಭ ಸೇರಿ ರಾಜ್ಯಾದ್ಯಂತ 1,695 ಅನಧಿಕೃತ ಶಾಲೆಗಳಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವ ಬದಲಾಗಿ ಮಕ್ಕಳ ಹಿತದೃಷ್ಟಿಯಿಂದ ಹಂತ ಹಂತವಾಗಿ ಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಮಗ್ರ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಶುಕ್ರವಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಆಯಾ ಸಮಸ್ಯೆಗಳನ್ನು ಒಂದೊಂದಾಗಿ ಪರಿಗಣಿಸಿ ಶಾಲೆಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ. ಆ.14ರೊಳಗೆ ಅನಧಿಕೃತ ಶಾಲೆಗಳನ್ನು ಮುಚ್ಚಿಸುವಂತೆ ಆದೇಶ ಹೊರಡಿಸಲಾಗಿದೆ. ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ, ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
1,695 ಶಾಲೆಗಳು ಯಾವುವು?: ರಾಜ್ಯಾದ್ಯಂತ 26 ಶಾಲೆಗಳು ನೋಂದಣಿಯನ್ನೇ ಮಾಡಿಲ್ಲ, ಅನುಮತಿ ಪಡೆಯದೆ ಉನ್ನತೀಕರಿಸಿರುವ ಶಾಲೆಗಳು 76, ಇತರ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಅನುಮತಿ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಪಡೆದಿರುವ 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ 190, ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು-495 ಸೇರಿ 1,695 ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಅನುಮತಿ ತಿರಸ್ಕರಿಸುವ ಶಾಲೆಗಳಿಗೂ ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಸಂಬಂಧ ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುವಂತೆ ಸೂಚಿಸುವುದಾಗಿ ತಿಳಿಸಿದರು. ಈ ವೇಳೆ ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ. ಕಾವೇರಿ ಉಪಸ್ಥಿತರಿದ್ದರು.
ಪಠ್ಯಕ್ರಮ ವಂಚನೆ ಕ್ರಮಕ್ಕೆ ಆಗ್ರಹ: ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ನಿಯಮಬಾಹಿರವಾಗಿ ಕೇಂದ್ರ ಪಠ್ಯಕ್ರಮ ಎಂದು ಬಿಂಬಿಸಿ ಜನಸಾಮಾನ್ಯರನ್ನು ವಂಚಿಸುತ್ತಿರುವ ಸಾವಿರಾರು ಶಾಲೆಗಳಿದ್ದು ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್್ಸ) ಒತ್ತಾಯಿಸಿದೆ.
ಶಿಕ್ಷಣ ಸಚಿವರೊಂದಿಗೆ ನಡೆದ ಸಭೆಯಲ್ಲಿ ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ರಾಜ್ಯ ಪಠ್ಯಕ್ರಮ ಬೋಧಿಸುತ್ತಿದ್ದರೂ ಸಿಬಿಎಸ್ಇ, ಐಸಿಎಸ್ಇ, ಐಜಿಸಿಎಸ್ ಪಠ್ಯಕ್ರಮ ಅನುಸರಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಶಾಲೆಗಳನ್ನು ಗುರುತಿಸಿ ಆರ್ಟಿಇ ಕಾಯ್ದೆ ನಿಯಮಕ್ಕೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದ ಅನಧಿಕೃತ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪರಿಗಣಿಸಿ ಆದೇಶ ಹೊರಡಿಸಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಏಕರೂಪದ ಪಠ್ಯಬೋಧನೆ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ. ಮಾನ್ಯತೆ ನವೀಕರಣ ಅರ್ಜಿಗಳು ತಿರಸ್ಕೃತಗೊಂಡಿರುವ ಶಾಲೆಗಳಿಗೆ ನಿಯಮ ರಚಿಸಿ ಪ್ರಕಟಿಸುವವರೆಗೂ ನ್ಯಾಯಾಲಯದ ಮೊರೆ ಹೋದ ಶಿಕ್ಷಣ ಸಂಸ್ಥೆಗಳಿಗೆ ‘ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿ’ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಗ್ನಿಶಾಮಕ ಮತ್ತು ಕಟ್ಟಡ ಸುರಕ್ಷತೆ ನಿಯಮಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳುವುದಿಲ್ಲ. ಸರ್ಕಾರ ನಿಗದಿ ಮಾಡಿರುವ ನಿಯಮಗಳನ್ನು ಪಾಲನೆ ಮಾಡಲೇಬೇಕು.
| ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಶಿಕ್ಷಕರ ಪ್ರಶಸ್ತಿ ಮೊತ್ತ ಹೆಚ್ಚಳ
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಈ ಬಾರಿ ರಾಜ್ಯ ಪ್ರಶಸ್ತಿ ಪಡೆಯುತ್ತಿರುವ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ನೀಡುತ್ತಿದ್ದ ನಗದು ಬಹುಮಾನವನ್ನು 10 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಹೆಚ್ಚಳ ಮಾಡಿದೆ. ಸೆ.5 ರಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಾಲಾ ಶಿಕ್ಷನ ಇಲಾಖೆ ಸೂಚನೆ ನೀಡಿದೆ.
ಶಿಕ್ಷಕರ ದಿನಾಚರಣೆಗೆ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಸೂಚನೆ ನೀಡಿದೆ. ಅದರಂತೆ ಇಲ್ಲಿಯವರೆಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡುತ್ತಿತ್ತು. ಪ್ರತಿ ಜಿಲ್ಲೆಗೆ ಒಬ್ಬರಂತೆ ಆಯ್ಕೆ ಮಾಡಿ ಪ್ರಶಸ್ತಿ ವಿತರಣೆ ಮಾಡುತ್ತಿತ್ತು. ಈ ವರ್ಷದಿಂದ ಪ್ರಶಸ್ತಿ ಮೊತ್ತವನ್ನು ಪರಿಷ್ಕರಣೆ ಮಾಡಿದ್ದು, 25 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. ಉಳಿದಂತೆ, ರಾಷ್ಟ್ರ ಪ್ರಶಸ್ತಿಗೆ ನೀಡುವ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಲೆಗಳಿಗೆ ನೀಡುವ 50 ಸಾವಿರ ರೂ.ಗಳನ್ನು ಹಿಂದಿನ ಮುಂದುವರಿಸಿದೆ. ಒಟ್ಟಾರೆ ಕಾರ್ಯಕ್ರಮಕ್ಕಾಗಿ 48,75,000 ರೂ.ಗೆ ಅನುಮೋದನೆ ನೀಡಿದೆ.
18ರಿಂದ ಮೊಟ್ಟೆ ವಿತರಣೆ ಶುರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 2 ದಿನ ನೀಡುತ್ತಿರುವ ಮೊಟ್ಟೆ ವಿತರಣೆ ಯೋಜನೆಯನ್ನು ಆ.18ರಂದು ಅಧಿಕೃತವಾಗಿ ಶಾಲೆಯೊಂದರಲ್ಲಿ ಮೊಟ್ಟೆ/ಬಾಳೆಹಣ್ಣು/ಶೇಂಗಾ ಚಿಕ್ಕಿ ವಿತರಿಸುವ ಮೂಲಕ ಚಾಲನೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ವಿದ್ಯುತ್, ನೀರಿನ ಬಿಲ್ ಮನ್ನಾ?: ಶಾಲೆಗಳ ನೀರು, ವಿದ್ಯುತ್ ಬಿಲ್ ಮೊತ್ತವನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಬರುತ್ತಿವೆ. ಸರ್ಕಾರಿ ಶಾಲೆಗಳ ಬಿಲ್ ಅತಿ ಕಡಿಮೆ ಇರುವುದರಿಂದ ಮನವಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
50 ಲಕ್ಷ ಗಿಡ ನೆಡಲು ಯೋಜನೆ: ಬಜೆಟ್ನಲ್ಲಿ ಘೋಷಿಸಿದ್ದಂತೆ ಶಾಲಾ ಆವರಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ 50 ಲಕ್ಷ ಗಿಡಗಳನ್ನು ನೆಡುವ ‘ಸಸ್ಯ ಶ್ಯಾಮಲಾ’ ಯೋಜನೆ ಅನುಷ್ಠಾನಕ್ಕೆ ರ್ಚಚಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’