ಶನಿವಾರಸಂತೆ: ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪರೀಕ್ಷೆ ಸಹಕಾರಿ ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮಣ್ಣು ಪರೀಕ್ಷಾ ವಿಜ್ಞಾನಿ ಡಾ.ನಡಾಪ್ ಅಭಿಪ್ರಾಯಪಟ್ಟರು.
ಕಾಫಿ ಮಂಡಳಿ, ಹೇಮಾವತಿ ರೋಟರಿ ಕ್ಲಬ್ ಮತ್ತು ಫ್ಲಾಂಟರ್ಸ್ ಕ್ಲಬ್ ಸಹಯೋಗದಲ್ಲಿ ಕೊಡ್ಲಿಪೇಟೆ ಫ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಣ್ಣು ಪರೀಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆಯಾಧರಿತ ಪ್ರದೇಶಗಳಲ್ಲಿ ಮಣ್ಣಿನ ರಸಸಾರ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ 2 ವರ್ಷಕೊಮ್ಮೆ ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ 3 ವರ್ಷಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದರು.
ಮಣ್ಣಿನ ಪರೀಕ್ಷಾ ವರದಿಗೆ ಅನುಸಾರವಾಗಿ ಸುಣ್ಣವನ್ನು ಜಮೀನಿಗೆ ಹಾಕಬೇಕು. ಇದರೊಂದಿಗೆ ಮಣ್ಣಿನ ಪೋಷಕಾಂಶಕ್ಕೆ ಅನುಗುಣವಾಗಿ ಗೊಬ್ಬರ ಹಾಕುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು. ಇದರಿಂದ ಮುಂದಿನ ತಲೆಮಾರಿಗೆ ಆರೋಗ್ಯಯುತ ಮಣ್ಣು ದೊರಕಲಿದೆ ಎಂದರು.
ಕಾಫಿ ಮಂಡಳಿ ಶನಿವಾರಸಂತೆ ವಲಯ ವಿಸ್ತರಣಾಧಿಕಾರಿ ರಂಜಿತ್ಕುಮಾರ್ ಮಾತನಾಡಿ, ಕಾಫಿ ಬೆಳೆಗಾರರ ಉಪಯೋಗಕ್ಕಾಗಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ನೆರವಿನಿಂದ ಮಣ್ಣು ಪರೀಕ್ಞಾ ಅಭಿಯಾನವ ಹಮ್ಮಿಕೊಳ್ಳಲಾಗುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಹೇಮಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಮೃತ್ಕುಮಾರ್ ಮಾತನಾಡಿದರು. ಕಾಫಿ ಸಂಶೋಧನಾ ಕೇಂದ್ರದ ಡಾ. ಶೀನಾ ಮೋಹನ್, ಲಕ್ಷ್ಮೀಕಾಂತ್, ಕಾಫಿ ಮಂಡಳಿ ವಲಯ ಕಚೇರಿಯ ಸುಚಿತ್ರಾ, ಪ್ರಶಾಂತ್, ಥಾಮಸ್ ಮಣ್ಣು ಪರೀಕ್ಷೆ ನಡೆಸಿದರು. ಹೇಮಾವತಿ ರೋಟರಿ ಕ್ಲಬ್ ಕಾರ್ಯದರ್ಶಿ ಭಾನು ಪ್ರಕಾಶ್, ನಿರ್ದೇಶಕ ದುಶ್ಯಂತ್ ಇತರರಿದ್ದರು. ನೂರಕ್ಕೂ ಹೆಚ್ಚು ರೈತರು ಮಣ್ಣು ಪರೀಕ್ಷೆ ಮಾಡಿಸಿದರು.
–