ರಾಮನಗರ: ಬಡವರ ವಿಷಯದಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಸಮಾಜಸೇವೆ ಜತೆಗೆ ಅಭಿವೃದ್ಧಿ ಮಾಡಲು ಬಂದಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಬಿಳಗುಂಬ ಮತ್ತು ಹರೀಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಎರಡನೇ ದಿನದ ಕ್ಷೇತ್ರ ಪ್ರವಾಸದಲ್ಲಿ ರಾಜೀವ್ ಗಾಂಧಿಪುರ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ, ಮುಗಿದ ಮೇಲೆ ಎಲ್ಲರೂ ನಮ್ಮವರೇ. ಹಾಗಾಗಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ನಾನು ಚುನಾವಣೆಗೆ ಬಂದಿದ್ದಾಗ ರಸ್ತೆಗಳ ಸ್ಥಿತಿ ಹೇಗಿತ್ತು, ಶಾಸಕಿಯಾದ ನಂತರ ಅಭಿವೃದ್ಧಿ ಕೆಲಸಗಳು ಎಷ್ಟಾಗಿವೆ ಎಂಬುದು ಪ್ರತ್ಯಕ್ಷವಾಗಿ ನಿಮ್ಮ ಕಣ್ಣ ಮುಂದಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮಹಾಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಇದ್ದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಚ್.ಶಂಕರ್, ಇಂಜಿಯರ್ಗಳಾದ ರಾಜು, ರಂಗಮೂರ್ತಿ, ತಹಸೀಲ್ದಾರ್ ನರಸಿಂಹಮೂರ್ತಿ, ರಾಜಸ್ವ ನಿರೀಕ್ಷಕ ನರೇಶ್, ಪಿಡಿಒ ಎಂ.ರಾಜೇಗೌಡ ಮತ್ತಿತರರು ಶಾಸಕರ ಪ್ರವಾಸದಲ್ಲಿ ಹಾಜರಿದ್ದರು.
ವದಂತಿ ಹಬ್ಬಿಸಬೇಡಿ, ಸಹಕಾರ ನೀಡಿ
ಕರೊನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್ ಎಲ್ಲರೂ ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿದ್ದೇವೆ. ನನಗೆ ಸಹಕಾರ ಕೊಡಿ, ಸುಮ್ಮನೆ ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಬೇಡಿ ಎಂದು ಮಾಧ್ಯಮವರಿಗೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು. ಹಾಗೂ ಜೆಡಿಎಸ್ನ ಯಾವುದೇ ಕಾರ್ಯಕರ್ತರು ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್ ಸೇರುವ ವಿಚಾರ ಕೇವಲ ಊಹಾಪೋಹ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.