ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘೋಷಿಸಿದೆ.
ಆರೋಪಿಗಳಾದ ಕೊಡಾಜೆ ಮೊಹಮ್ಮದ್ ಷರೀಫ್(53), ಮಸೂದ್ ಕೆ.ಎ.(40) ಅವರ ಸುಳಿವು ಕೊಟ್ಟವರಿಗೆ ಒಟ್ಟು 10 ಲಕ್ಷ ರೂ. ಬಹುಮಾನ ಘೋಷಿಸಿಲಾಗಿದೆ. ಒಬ್ಬ ಆರೋಪಿಯನ್ನ ಪತ್ತೆ ಮಾಡಿದರೂ 5 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬುವರ ಪುತ್ರ ಮೊಹಮ್ಮದ್ ಷರೀಫ್. ನೆಕ್ಕಿಲಾಡಿಯ ಅಗ್ನಾಡಿ ಹೌಸ್ನ ಅಬೂಬಕರ್ ಎಂಬಾತನ ಪುತ್ರ ಮಸೂದ್. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಂಗಳೂರಿನ ದೊಮ್ಮಲೂರು ಬಳಿ ಇರೋ ಎನ್ಐಎ ಎಸ್ಪಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಆರೋಪಿಗಳಿಬ್ಬರ ಮಾಹಿತಿ ತಿಳಿದವರು ದೂ: 080-29510900, 8904241100, ಇಮೇಲ್ [email protected], ಅಂಚೆ ವಿಳಾಸ: ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್ಐಎ), 8ನೇ ಮಹಡಿ ಸರ್ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು-560071ಗೆ ಮಾಹಿತಿ ನೀಡಬಹುದು.
ಕಳೆದ ಎರಡೂವರೆ ತಿಂಗಳ ಹಿಂದೆಯೂ ನಾಲ್ವರು ಪಿಎಫ್ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘೋಷಿಸಿತ್ತು. ಬೆಳ್ಳಾರೆ ಬೂಡು ನಿವಾಸಿ ಮೊಹ್ಮದ್ ಮುಸ್ತಫ ಎಸ್. ಅಲಿಯಾಸ್ ಮುಸ್ತಫ ಪೈಚಾರು ಹಾಗೂ ಮಡಿಕೇರಿ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ಎಂ.ಎಚ್. ತುಫೈಲ್ನನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂ., ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ ಉಮ್ಮರ್ ಫಾರೂಕ್ ಎಂ.ಆರ್. ಅಲಿಯಾಸ್ ಉಮ್ಮರ್, ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಪೈಂಟರ್ ಸಿದ್ದೀಕ್ ಅಲಿಯಾಸ್ ಗುಜರಿ ಸಿದ್ದೀಕ್ನನ್ನು ಹುಡುಕಿಕೊಟ್ಟವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದೀಗ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಲಾಗಿದೆ.
ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…
ಕಾಂಗ್ರೆಸ್ನ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಕಳ್ಳರ ಕೈ ಚಳಕ! ವೃದ್ಧೆಯ ಸರ ಕಳವು ಮಾಡಿದ ಖದೀಮರು