ಮೈಸೂರು: ಮೇ 8ರಂದು ಮಂತ್ರಾಲಯದಲ್ಲಿನ ರಾಘವೇಂದ್ರ ಸನ್ನಿಧಿ ಮುಂಭಾಗ ವಿಶ್ವ ಹಾಗೂ ದೇಶೀಯ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ರಾಘವೇಂದ್ರ ಸ್ವಾಮೀಜಿ ಅವರ ರಂಗೋಲಿ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ಕಲಾವಿದ ಪುನೀತ್ ತಿಳಿಸಿದರು.
ಈಗಾಗಲೇ ಹಲವಾರು ಮಂದಿ ಬೃಹತ್ ಚಿತ್ರಗಳನ್ನು ರಚಿಸಿದ್ದಾರೆ. ಆದರೆ ಮೈಸೂರು ಕಲಾವಿದರಾದ ನಾವು (ಒಟ್ಟು 9)ಕಡಿಮೆ ಜನರ ತಂಡ ಹಾಗೂ ಕೇವಲ 12 ಗಂಟೆ ಅವಧಿಯಲ್ಲಿ ಚಿತ್ರ ರಚನೆಯ ಮೂಲಕ ವಿಶ್ವ ಹಾಗೂ ಇನ್ನಿತರ ದಾಖಲೆಗೆ ಮುಂದಾಗಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಂಡದಲ್ಲಿ ಇಬ್ಬರು ಮಹಿಳೆಯರೂ ಇದ್ದು, ಸುಮಾರು ಅಂದಾಜು 800 ಕೆಜಿ ರಂಗೋಲಿ ಪುಡಿ ಬಳಸಿಕೊಳ್ಳಲಾಗುತ್ತಿದೆ. ಆ ಪ್ರದೇಶದಲ್ಲಿ ಇವು ಲಭ್ಯವಿಲ್ಲದ ಕಾರಣ ಇಲ್ಲಿಂದಲೇ ರೈಲಿನ ಮೂಲಕ ಕೊಂಡೊಯ್ಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.