ಮಸ್ಕಿ: ಪಟ್ಟಣದ ಅಗಸಿ ಬಳಿಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಸವಣ್ಣನ ಮೂರ್ತಿ ಗುರುವಾರ ಕಳ್ಳತನವಾಗಿದೆ. ಶುಕ್ರವಾರ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು ಬಸವಣ್ಣನ ಮೂರ್ತಿ ಇಲ್ಲದ್ದನ್ನು ನೋಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಲವಾರು ವರ್ಷಗಳ ಹಿಂದೆ ಎತ್ತು ಮೃತಪಟ್ಟ ಹಿನ್ನೆಲೆಯಲ್ಲಿ ಅದನ್ನು ಸಂಸ್ಕಾರ ಮಾಡಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ಕದ್ದಿರುವ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕೆಂದು ಹಿಂದುಪರ ಸಂಘಟನೆಯ ರಾಕೇಶ ಪಾಟೀಲ, ಪುರಸಭೆ ಸದ್ಯ ಮಂಜುನಾಥ ನಂದಿಹಾಳ, ಜನಾರ್ದನ್ ಪತ್ತಾರ ಮತ್ತಿತರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.