ಬೆಳಗಾವಿ: ಆನೆ ದಂತಗಳ ಸಾಗಾಟದಲ್ಲಿ ತೊಡಗಿದ್ದ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಇಬ್ಬರನ್ನು ಬಂಧಿಸಿ, ಏಳು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಲಘಮಣ್ಣಾ ಯಲ್ಲಪ್ಪ ನಾಯಿಕ(26), ಬೆಳಗಾವಿಯ ಮಾರ್ಕಂಡೇಯ ನಗರದ ಮಲ್ಲಪ್ಪ ಬಾಳಪ್ಪ ದೂಳಪ್ಪಗೋಳ(38) ಬಂಧಿತ ಆರೋಪಿಗಳು.
ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಆನೆದಂತಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಪಿಎಸ್ಐ ರೋಹಿಣಿ ಪಾಟೀಲ ಅವರು ತಮ್ಮ ಸಿಬ್ಬಂದಿ ಸಮೇತ ಶನಿವಾರ ತಡರಾತ್ರಿ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಬಂಧಿತರಿಂದ 3.5ರಿಂದ 4 ಇಂಚು ಗಾತ್ರದ, 290ರಿಂದ 410 ಗ್ರಾಂ ತೂಕದ ಕಂದು ಬಣ್ಣದ ಒಟ್ಟು ಏಳು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಳಗಾವಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಆರ್.ಜೆ.ಯರನಾಳ, ಎಸ್.ಆರ್.ಆರಿಬೆಂಚಿ, ಕೆ.ಡಿ.ಹಿರೇಮಠ ಹಾಗೂ ಬಿ.ಬಿ.ಇಂಗಳಗಿ ಇದ್ದರು.