ಇಂಡೋ-ಸ್ವಿಸ್ ನಾವೀನ್ಯತಾ ವೇದಿಕೆ ಸೃಜನೆ

5

ಬೆಂಗಳೂರು: ವಿಜ್ಞಾನ ಮತ್ತು ಸಂಶೋಧನೆ ಹಾಗೂ ನಾವೀನ್ಯತಾ ಕ್ಷೇತ್ರದಲ್ಲಿ ಕರ್ನಾಟಕದ ಜತೆಗೆ ಕೆಲಸ ಮಾಡಲು ಸ್ವಿಟ್ಜರ್ಲೆಂಡ್ ಆಸಕ್ತಿ ವ್ಯಕ್ತಪಡಿಸಿದೆ. ಇದಕ್ಕಾಗಿ ಇಂಡೋ-ಸ್ವಿಸ್ ನಾವೀನ್ಯತೆ ವೇದಿಕೆ ಸೃಜಿಸಿ ಸಾಂಸ್ಥಿಕ ವ್ಯವಸ್ಥೆ ಅಸ್ತಿತ್ವಕ್ಕೆ ತರಲು ಮುಂದಾಗಿದೆ.

ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಎಂ.ಬಿ.ಪಾಟೀಲ್ ಅವರನ್ನು ಸ್ವಿಟ್ಜರ್ಲೆಂಡ್ ಕಾನ್ಸುಲ್ ಜನರಲ್ಲ ಜೋನಾಸ್ ಬ್ರನ್ಶುವಿಗ್ ಬೆಂಗಳೂರಿನಲ್ಲಿ ಸೋಮವಾರ ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಬ್ರನ್ಶವಿಗ್ ಮಾತನಾಡಿ ಸ್ವಿಟ್ಸರ್ಲೆಂಡ್ ಹಾಗೂ ಕರ್ನಾಟಕದ ನಡುವಿನ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸಾಂಸ್ಥಿಕ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್)ದಲ್ಲಿ ಮೂರು ದಿನಗಳ ಕಾಲ ಸಮಾವೇಶ ನಡೆಸುವ ಮೂಲಕ ಈ ವೇದಿಕೆಗೆ ಚಾಲನೆ ನೀಡಲಾಗುವುದು. ಇದರಲ್ಲಿ ಭಾರತ ಮತ್ತು ಸ್ವಿಸ್‌ಗಳ ತಲಾ 25 ಪರಿಣತರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡರು.

ಕರ್ನಾಟಕದಲ್ಲಿ ಸ್ವಿಟ್ಜರ್ಲೆಂಡ್‌ನ 49 ಕಂಪನಿಗಳು ಸಕ್ರಿಯವಾಗಿವೆ. 17,800 ಉದ್ಯೋಗವಕಾಶ ಸೃಷ್ಟಿಸಿವೆ. ಈ ಪೈಕಿ ಸರಿಸುಮಾರು 40 ಕಂಪನಿಗಳು ರಾಜ್ಯದಲ್ಲಿ ತಯಾರಿ ಘಟಕಗಳನ್ನು ಹೊಂದಿವೆ. ಮುಂಬರುವ ಸಮಾವೇಶದಲ್ಲಿ ಆ್ಯಂಟಿಮೈಕ್ರೋಬಯಲ್ ರೆಸಿಸ್ಟೆನ್ಸ್ (ಎಎಂಆರ್) ಕುರಿತು ಹೆಚ್ಚಿನ ಗಮನಹರಿಸುವುದು ಮುಖ್ಯ ಉದ್ದೇಶವಾಗಿದೆ.

ಈ ಕ್ರಮವು ಅಂತಿಮವಾಗಿ ಶಿಕ್ಷಣ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಭಾಗಿತ್ವ ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ. ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಹಲವು ಸ್ವಿಸ್ ಉದ್ದಿಮೆಗಳಿವೆ. ಭಾರತದಲ್ಲಿ ಹೂಡುತ್ತಿರುವ ಬಂಡವಾಳ ಪ್ರಮಾಣವು 2015 ರಿಂದ 2022ರ ನಡುವೆ ಶೇ.23ಕ್ಕೆ ಏರಿಕೆ ಕಂಡಿದೆ ಎಂದು ಬ್ರನ್ಶವಿಗ್ ವಿವರಿಸಿದರು.

ಜತೆಗೆ ಭಾರತದ ಕಂಪನಿಗಳು ಸ್ವಿಸ್‌ನಲ್ಲಿ ಹೂಡುತ್ತಿರುವ ಬಂಡವಾಳದಲ್ಲೂ ಕಳೆದ ಏಳು ವರ್ಷಗಳಲ್ಲಿ ಶೇ.9ರಷ್ಟು ಬೆಳವಣಿಗೆ ಕಂಡು ಬಂದಿದೆ. ಉಭಯ ದೇಶಗಳ ಸಹಭಾಗಿತ್ವವು ರಚನಾತ್ಮಕ ಪ್ರಯತ್ನ, ಹೂಡಿಕೆಯು ವೃದ್ಧಿಪಥದಲ್ಲಿದೆ ಎಂದು ಗಮನಸೆಳೆದರು.

ಈ ಮಾತಿಗೆ ಸಚಿವ ಎಂ.ಬಿ.ಪಾಟೀಲ್ ಸ್ಪಂದಿಸಿ, ಬೃಹತ್ ರಾಷ್ಟ್ರವಾಗಿರುವ ಭಾರತದಲ್ಲಿ ರಚನಾತ್ಮಕ ಪರಿವರ್ತನೆಗಳು ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರದಂತಹ ಹತ್ತಾರು ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿವೆ. ಸ್ವಿಸ್ ಕಂಪನಿಗಳು ಇವುಗಳ ಜತೆಗೂಡಿ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಇದಕ್ಕೆ ಸರ್ಕಾರವು ಮುಕ್ತ ಅವಕಾಶ ನೀಡಲಿದೆ ಎಂದರು.

ಡಿಕಾರ್ಬನೈಸೇಷನ್, ಪರಿಸರಸ್ನೇಹಿ ಇಂಧನ ಉತ್ಪಾದನೆ ಹೆಚ್ಚಿಸಿ ಎಲ್ಲೆಡೆ ಹಸಿರು ರಕ್ಷಾ ಕವಚ ಸೃಷ್ಟಿಸುವ ಅಗತ್ಯವಿದ್ದು, ಸಾರ್ವಜನಿಕರಲ್ಲೂ ಆಸಕ್ತಿ ಹುಟ್ಟಬೇಕು. ಮಂಗಳೂರಿನಲ್ಲಿ ಹಸಿರು ಇಂಧನ ಉತ್ಪಾದಿಸಲು ಸರ್ಕಾರ ಮುಂದಡಿಯಿಟ್ಟಿದ್ದು, ಬೃಹತ್ ಪ್ರಮಾಣದ ಹೂಡಿಕೆ ಬರುತ್ತಿದೆ ಎಂದು ಎಮ.ಬಿ.ಪಾಟೀಲ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ಸಿಇಒ ದೊಡ್ಡ ಬಸವರಾಜ ಇದ್ದರು.