ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುಪ್ರೀಂ ಕೋರ್ಟ್ ನಿರ್ದೇಶನಾನುಸಾರ ಸರ್ಕಾರ ಒದಗಿಸುತ್ತಿರುವ 5 ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸ್ವೀಕರಿಸಿದರೆ, ಅದು ದೇಶದ ಎಲ್ಲ ಮುಸಲ್ಮಾನರ ನಿರ್ಣಯವಾಗಲಾರದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಬುಧವಾರ ಹೇಳಿದೆ.
ಸುನ್ನಿ ವಕ್ಫ್ ಬೋರ್ಡ್ ಇಡೀ ಮುಸಲ್ಮಾನ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಲ್ಲ. ಅದು ಜಮೀನು ಸ್ವೀಕರಿಸಿದರೆ ಅದು ಇಡೀ ದೇಶದ ಮುಸಲ್ಮಾನರ ನಿರ್ಣಯ ಎಂದು ಎನಿಸಿಕೊಳ್ಳದು. ಅಲ್ಲದೆ, ತಾನು ಮತ್ತು ತನ್ನ ಒಡನಾಡಿ ಸಂಸ್ಥೆ, ಸಂಘಟನೆಗಳು ಅಯೋಧ್ಯೆಯಲ್ಲಿ ಜಮೀನು ಸ್ವೀಕರಿಸಬಾರದು ಎಂಬ ನಿರ್ಣಯಕ್ಕೆ ಬಂದಿದ್ದೇವೆ ಎಂದು ಎಐಎಂಪಿಎಲ್ಬಿಯ ಹಿರಿಯ ಕಾರ್ಯಕಾರಿ ಸದಸ್ಯ ಮೌಲಾನಾ ಯಾಸಿನ್ ಉಸ್ಮಾನಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನಿರ್ದೇಶಿಸಿದಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಗೆ ಸಮೀಪ ಗುರುತಿಸಿದ 5 ಎಕರೆ ಜಮೀನನ್ನು ಬುಧವಾರ ಸುನ್ನಿ ವಕ್ಫ್ ಬೋರ್ಡ್ಗೆ ಕೊಡಲು ತೀರ್ಮಾನಿಸಿದೆ. ಈ ಸುದ್ದಿಯ ಹಿನ್ನೆಲೆಯಲ್ಲಿ ಎಐಎಂಪಿಎಲ್ಬಿ ಈ ಪ್ರತಿಕ್ರಿಯೆ ನೀಡಿದೆ. (ಏಜೆನ್ಸೀಸ್)