ಹೊಸಪೇಟೆ: ವೇತನ ಹೆಚ್ಚಳ, ಒಪಿಎಸ್ ಜಾರಿಗಾಗಿ ಸರ್ಕಾರಿ ನೌಕರರು ಬುಧವಾರ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ, ರಾಜ್ಯ ಸರ್ಕಾರ ಶೇ.17 ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿದ್ದರಿಂದ ಅರ್ಧ ದಿನಕ್ಕೆ ಮೊಟಕುಗೊಂಡಿತು.
ಕಚೇರಿಗೆ ಬಂದು ವಾಪಸ್ಸಾದರು: ಹೊಸಪೇಟೆ ನಗರಸಭೆ ಮತ್ತು ಜಿಲ್ಲಾ ಖಜಾನೆ ಇಲಾಖೆ ಕೆಲ ಸಿಬ್ಬಂದಿ ಎಂದಿನಂತೆ ಕಚೇರಿಗೆ ಹಾಜರಾಗಿದ್ದರು. ಇನ್ನುಳಿದಂತೆ ಜಿಲ್ಲಾಡಳಿತ ಭವನದ ಎಲ್ಲ ಕುರ್ಚಿಗಳು ಖಾಲಿಯಾಗಿದ್ದರೆ, ಪಿಡಬ್ಲುೃಡಿ ಕಚೇರಿ ಬಾಗಿಲು ಮುಚ್ಚಿತ್ತು.
ಹಾಜರಿ ಪುಸ್ತಕಕ್ಕೆ ಸಹಿ: ನಗರಸಭೆಗೆ ಹಾಜರಾಗಿದ್ದ ಸಿಬ್ಬಂದಿ ಪೈಕಿ ಕೆಲವರು ಕೆಲಸದಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ಕಚೇರಿಯಿಂದ ಪಲಾಯನ ಮಾಡಿದರು. ಗರ್ಭಿಣಿಯರ ಪರದಾಟ: ಮುಷ್ಕರ ಸಾರ್ವಜನಿಕ ಆಸ್ಪತ್ರೆಗಳಿಗೆ ಅನ್ವಯಿಸುವುದಿಲ್ಲವೆಂದು ಭಾವಿಸಿ ಬಂದಿದ್ದ ಅನೇಕರು ರೋಗಿಗಳು ಹಾಗೂ ಹಳ್ಳಿಗಳಿಂದ ಮಾಸಿಕ ತಪಾಸಣೆಗಾಗಿ ಆಗಮಿಸಿದ್ದ ಗಭಿರ್ಣಿಯರು ಒಪಿಡಿ ಸೇವೆ ಇಲ್ಲದೆ ಪರದಾಡಿದರು.
ಶಾಲೆಗೆ ಬೀಗ, ಮಕ್ಕಳು ಅಂಗಳಕ್ಕೆ: ಸರ್ಕಾರಿ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಬುಧವಾರ ಶಾಲೆಗಳು ಬಾಗಿಲು ತೆರೆಯಲಿಲ್ಲ. ಹೀಗಾಗಿ ಮಕ್ಕಳು ದಿನವಿಡೀ ಮನೆಯಂಗಳದಲ್ಲಿ ಆಟೋಟದಲ್ಲಿ ತಲ್ಲೀನರಾಗಿದ್ದರು.
ಕಚೇರಿಗೆ ಮರಳಿದ ನೌಕರರು: ಸರ್ಕಾರ ಶೇ.17 ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿದರೆಲ್ಲದೇ ಅನೇಕ ನೌಕರರು ಮಧ್ಯಾಹ್ನ ಬಳಿಕ ಕರ್ತವ್ಯಕ್ಕೆ ಹಾಜರಾದರು. ಕೋಟ್.. ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಐದು ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ. ಜಿಲ್ಲೆ ಸೇರಿದಂತೆ ಎಲ್ಲೆಡೆ ನೌಕರರು ಬಿಗಿಪಟ್ಟು ಪ್ರದರ್ಶಿಸಿದ್ದರಿಂದ ಸರ್ಕಾರ ಮಣಿಯಿತು. ಸರ್ಕಾರದ ನಿರ್ಧಾರ ಸಂತೃಪ್ತಿಯಿಲ್ಲದಿದ್ದರೂ, ಸಮಾಧಾನ ತಂದಿದೆ. ಸದ್ಯಕ್ಕೆ ಮುಷ್ಕರ ಕೈಬಿಟ್ಟಿದ್ದೇವೆ. ಕಡ್ಲಿ ವೀರಭದ್ರೇಶ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ