More

    ಹಲಸಿನ ರಕ್ಷಣೆಗೆ ಔಷಧೋಪಚಾರ ಅಗತ್ಯ

    ತೋಟಗಾರಿಕಾ ಇಲಾಖೆ ಸಲಹೆ

    ಮುಂಜಾಗ್ರತೆ ವಹಿಸಲು ಕಿವಿಮಾತು


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಹಲಸಿನ ಬೆಳೆಗೆ ಕಾಡುವ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯವಾಗಿದ್ದು, ಕಾಲಕಾಲಕ್ಕೆ ಔಷಧೋಪಚಾರದ ಮೂಲಕ ಹತೋಟಿ ಸಾಧ್ಯ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ.
    ನೊಣ, ಹಿಟ್ಟು ತಿಗಣಿ, ಕಾಂಡಕೊರಕ, ಹಣ್ಣು ಕೊರಕ, ಕೊಳೆ ರೋಗ, ಕಾಂಡ ಒಣಗುವ ರೋಗ ಪ್ರಮುಖವಾಗಿದ್ದು, ಇವು ಹಲಸಿನ ಇಳುವರಿ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತೆ ವಹಿಸಬೇಕು ಆಯಾ ತಾಲೂಕು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
    ತೂಬಗೆರೆ ಹಲಸು ಪ್ರಸಿದ್ಧ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸುತ್ತಮುತ್ತಲಿನಲ್ಲಿ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುತ್ತಾರೆ. ರಾಜ್ಯದಲ್ಲೇ ತೂಬಗೆರೆ ಹಲಸು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹಲಸಿನ ಗುಣಮಟ್ಟ, ರುಚಿ ಹಾಗೂ ಬಣ್ಣ ವಿಶೇಷವಾಗಿದೆ. ಆದರೆ ಸಲಿಗೆ ಕಾಡುವ ಕೀಟಬಾಧೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ತೂಬಗೆರೆ ಹಲಸು ಸಹ ಪ್ರಾಮುಖ್ಯತೆ ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಕಾಲಕಾಲಕ್ಕೆ ತೋಟಗಾರಿಕೆ ಇಲಾಖೆ ನೀಡುವ ಸಲಹೆ ಪಾಲಿಸಿ ರೋಗ ನಿಂತ್ರಣಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

    ಕಾಂಡ ಒಣಗುವ ರೋಗ ಹಲಸಿನ ಹಣ್ಣುಗಳ ಮೇಲೆ ಕಂದು ಬಣ್ಣದ ತೇಪೆ ಕಂಡು ಬರುತ್ತದೆ. ಬಳಿಕ ಹಣ್ಣು ಮೃಧುವಾಗಿ ಆ ಜಾಗ ಕೊಳೆಯಲು ಆರಂಭಿಸುತ್ತದೆ, ಇದು ಕಾಂಡ ಒಣಗುವ ರೋಗದ ಲಕ್ಷಣವಾಗಿದೆ. ರೋಗದ ತೀವ್ರತೆಗೆ ಎಲೆಗಳು ಹಳದಿಯಾಗಿ ಉದುರಲು ಪ್ರಾರಂಭಿಸುತ್ತವೆ. ಕಾಂಡದ ತೊಗಟೆ ಮೇಲೆ ಕಂದು ಬಣ್ಣದ ತೇಪೆಗಳು ಕಂಡು ಬಂದು ಕಾಂಡ ಒಣಗಲು ಪ್ರಾರಂಭಿಸುತ್ತದೆ. ಬಳಿಕ ಮರ ಸಂಪೂರ್ಣ ಒಣಗಬಹುದು. ಇದನ್ನು ರೈತರು ಗಮನಿಸಿ ಉಪಚರಿಸಬೇಕು ಎಂದು ಗುಣವಂತ ತಿಳಿಸಿದ್ದಾರೆ.

    ನಿರ್ವಹಣಾ ಕ್ರಮಗಳು ಶೇ.1ರ ಬೋರ್ಡೊ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯುಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಒಣಗಿದ ಭಾಗವನ್ನು ಕತ್ತರಿಸಿ, ನಾಶಪಡಿಸಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯುಪಿ ಅಥವಾ 1 ಗ್ರಾಂ. ಕಾರ್ಬನ್‌ಡೈಜಿಮ್ ಅಥವಾ 1 ಗ್ರಾಂ. ಥೆಯೋಫಿನೈಟ್ ಮಿಥೈಲ್ ಅಥವಾ 2 ಗ್ರಾಂ. ಕ್ಲೋರೋಥೈಲೋನಿಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆಮಾಡಬೇಕು. ಮರಿ ಹುಳುಗಳು ಹಣ್ಣನ್ನು ಕೊರೆದು ಒಳಗೆ ಸೇರಿ ತಿರುಳನ್ನು ತಿಂದು ನಾಶಪಡಿಸುತ್ತದೆ. ಅಂತಹ ಬಾಧಿತ ಹಣ್ಣಿನ ಭಾಗ ಕೊಳೆಯುತ್ತದೆ. ಅದಕ್ಕೆ ಔಷಧ ಸಿಂಪಡಿಸಬೇಕು.

    ಕಾಂಡ ಕೊರಕ ಕಾಂಡದ ಮೇಲೆ ರಂಧ್ರಗಳು ಕಂಡುಬಂದರೆ ಅದಕ್ಕೆ ಕಾಂಡಕೊರಕ ಎನ್ನಲಾಗುತ್ತದೆ. ಇಂತಹ ರಂಧ್ರಗಳಿಂದ ಮರದ ಪುಡಿ ಉದುರುತ್ತದೆ. ರೆಂಬೆಗಳು ಒಣಗುತ್ತದೆ. ಕಾಂಡ ಕೊರಕದ ನಿಯಂತ್ರಣಕ್ಕಾಗಿ ಕೊರೆದ ರಂಧ್ರಗಳಲ್ಲಿ ಡೈಕ್ಲೊರೊವಾಸ್ 76 ಇಸಿ ಕೆಲ ಹನಿ ಹಾಕಿ ರಂಧ್ರಗಳನ್ನು ಹಸಿ ಮಣ್ಣಿನಿಂದ ಮುಚ್ಚಬೇಕು. ಬೇವಿನ ಬೀಜದ ಕಷಾಯ ಅಥವಾ 2ಮಿ.ಲೀ.ಪ್ರೊಪೆನೊಫಾಸ್ ಸಿಂಪರಣೆ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲಸಿನ ಬೆಳೆಗೆ ಯಾವುದೇ ಕೀಟಬಾಧೆ ಕಂಡುಬಂದರೆ ಕೂಡಲೇ ಆಯಾ ತಾಲೂಕುಗಳ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬೇಕು. ರೋಗಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಂಡುಬಂದಿಲ್ಲ. ಆದರೂ ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರಿಂದ ಸಲಿನ ರಕ್ಷಣೆ ಸಾಧ್ಯ.

    ಗುಣವಂತ, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts