ಕಾರವಾರ: ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ 29 ಶತಾಯುಷಿಗಳಿಗೆ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಭಾನುವಾರ ಸನ್ಮಾನ ಮಾಡಲಾಯಿತು. ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 31 ಶತಾಯುಷಿಗಳಿದ್ದಾರೆ. ಅದರಲ್ಲಿ ಇಬ್ಬರನ್ನು ಬಿಟ್ಟು ಉಳಿದೆಲ್ಲರ ಮನೆಗಳಿಗೆ ಅಧಿಕಾರಿಗಳು ತೆರಳಿ ಅಭಿನಂದನಾ ಪತ್ರ ನೀಡಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕಾರವಾರದ 105 ವರ್ಷದ ಲಕ್ಷ್ಮೀ ವಿ.ನಾಯಕ, ಹೊಸಾಳಿಯ ಕಲ್ಯಾಣಿ ಮುರಾರಿ ನಾಯ್ಕ ಅವರನ್ನು ಸನ್ಮಾನಿಸಿದರು. ಶಾಸಕ ಸತೀಶ ಸೈಲ್, ತಹಸೀಲ್ದಾರ್ ನಿಶ್ಚಲ ನರೋನಾ ಇದ್ದರು.
ಅಂಕೋಲಾದ ಮಂಕಾಳಿ ನಾಯ್ಕ ಪಾರ್ವತಿ ನಾಯಕ ಅವರ ಮನೆಗಳಿಗೆ ತೆರಳಿ ಸನ್ಮಾನ ಮಾಡಿದರು. ಅಲ್ಲದೆ, ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ, ಸುಕ್ರಿ ಗೌಡ ಅವರಿಗೂ ಸನ್ಮಾನಿಸಿದರು. ತಹಸೀಲ್ದಾರ್ ಅಶೋಕ ಭಟ್ ಇದ್ದರು.
ಉಳಿದವರನ್ನು ಆಯಾ ವಿಭಾಗದ ಎಸಿ, ತಹಸೀಲ್ದಾರ್ಗಳು ಮನೆಗಳಿಗೇ ತೆರಳಿ ಸನ್ಮಾನಿಸಿದರು.
ಇದನ್ನೂ ಓದಿ: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಭರವಸೆ
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ- ಇಳೆಗುಂಡಿಯ ಶತಾಯುಷಿ ಸುಬ್ಬಿ ಗೋಪಾಲಕೃಷ್ಣ ಭಟ್ಟ ಅವರನ್ನು ಯಲ್ಲಾಪುರ ತಹಶಿಲ್ದಾರ ಗ್ರೇಡ್-2 ಸಿ.ಜಿ.ನಾಯ್ಕ ಸನ್ಮಾನಿಸಿದರು. ಶಿರಸ್ತೆದಾರ ಕೆ.ಎಸ್.ಫರ್ನಾಂಡೀಸ್, ಚುನಾವಣಾ ಶಿರಸ್ತೆದಾರರಾದ ಗೀತಾ ಜಾಧವ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ನಾಗರಿಕರನ್ನು ಗೌರವಿಸಿ
ಹಿರಿಯ ನಾಗರಿಕರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಮಕ್ಕಳು ಹಾಗೂ ಸಮಾಜದ ಜವಾಬ್ದಾರಿ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಲ್ಲಿಕಾರ್ಜುನ ಜನಸೇವಾ ಸೊಸೈಟಿ ಹಾಗೂ ಯಲ್ಲಾಪುರ ಸ್ವಯಂ ಸೇವಾ ಸಂಸ್ಥೆಯಿAದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ತಮ್ಮ ಇಡೀ ಜೀವನವನ್ನು ಸವೆಸಿರುತ್ತಾರೆ. ವೃದ್ಧಾಪ್ಯದಲ್ಲಿ ಅವರ ಆರೋಗ್ಯ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಹಿರಿಯ ನಾಗರಿಕರನ್ನು ಮಕ್ಕಳು ನಿರ್ಲಕ್ಷಿಸಿದರೆ ಅವರ ರಕ್ಷಣೆಗಾಗಿ ಕಾನೂನು ಇದೆ. ಸಂಬಂಧಪಟ್ಟ ಇಲಾಖೆಗೆ ಅವರು ದೂರು ನೀಡಬಹುದು. ಅವರಿಗೆ ಪಿಂಚಣಿ ಸೌಲಭ್ಯ ಕೂಡಾ ದೊರೆಯಲಿದೆ ಎಂದರು. ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದಲ್ಲಿ ಮಕ್ಕಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಎಚ್.ಎಚ್. ಕುಕನೂರು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣಾಽಕಾರಿ ಶಿಲ್ಪಾ. ಎಂ ದೊಡ್ಡಮನಿ, ತಹಸೀಲ್ದಾರ್ ನಿಶ್ಚಲ್ ನರೋನಾ ನಿವೃತ್ತ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹೆಗಡೆ ವೇದಿಕೆಯಲ್ಲಿದ್ದರು.