ಕಡಬ: ಕರೊನಾ ವೈರಸ್ಗೆ ಇಡೀ ಮಾನವ ಸಂಕುಲವೇ ನಡುಗುತ್ತಿದ್ದರೆ, ಇತ್ತ ನಾಯಿಗಳು ಮಿದುಳು ಜ್ವರದ ವೈರಸ್ಗೆ ಸಾಮೂಹಿಕವಾಗಿ ಬಲಿಯಾಗುತ್ತಿವೆ.
ಬೀದಿನಾಯಿಗಳಲ್ಲಿ ಹೆಚ್ಚಾಗಿ ಕಾಣಸಿಕೊಂಡು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ನಾಯಿಗಳು ಬಲಿಯಾಗುತ್ತಿವೆ. ಪರಿಣಾಮ ಸಾಕು ನಾಯಿಗಳು ಈ ರೋಗಕ್ಕೆ ಬಲಿಯಾಗುವ ಭೀತಿ ಜನರನ್ನು ಆವರಿಸಿದೆ. ಇದೊಂದು ವೈರಸ್ ರೋಗವಾಗಿದ್ದು, ಮೂರು ತಿಂಗಳ ಮೊದಲೇ ನಾಯಿಗಳು ಈ ರೋಗಕ್ಕೆ ತುತ್ತಾದರೂ ಆರಂಭದಲ್ಲಿ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಕೊನೆಯ ಹತ್ತರಿಂದ ಹದಿನೈದು ದಿನಗಳಲ್ಲಿ ರೋಗ ಉಲ್ಭಣಿಸಿ ನಾಯಿಗಳು ಸಾವನ್ನಪ್ಪುತ್ತವೆ.
ವೈರಸ್ಗೆ ತುತ್ತಾದ ನಾಯಿಗಳು ರೇಬಿಸ್ ಪೀಡಿತ ನಾಯಿಯಂತೆ ವರ್ತಿಸುತ್ತಿದ್ದು, ಸಾಕು ನಾಯಿಗಳ ಮೇಲೆ ದಾಳಿ ಮಾಡುತ್ತವೆ. ಆ ಮೂಲಕ ರೋಗ ಹರಡುತ್ತಿದ್ದು, ಸಾಕುನಾಯಿ ಮಾಲೀಕರನ್ನು ಆತಂಕಕ್ಕೀಡು ಮಾಡುತ್ತಿದೆ. ಮೂಗಿನಿಂದ ಕೀವು ಬರಲು ಆರಂಭವಾಗುತ್ತದೆ ಮತ್ತು ಬಾಯಿಯಿಂದಲೂ ಕೀವು ಮಿಶ್ರಿತ ನೀರು ನಾಯಿ ಸಂಚರಿಸಿದ ಉದ್ದಕ್ಕೂ ಬೀಳುವುದರ ಪರಿಣಾಮ ರೋಗ ಹರಡುತ್ತದೆ.
ಈ ರೋಗದಿಂದ ಮನುಷ್ಯರಿಗೆ ಅಪಾಯವಿಲ್ಲ. ಬೇಸಿಗೆಯಲ್ಲಿ ರೋಗ ಹೆಚ್ಚಾಗಿ ಉಲ್ಭಣಿಸುತ್ತದೆ. ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸೀನ್ ನೀಡಬೇಕಾಗುತ್ತದೆ. ಬಳಿಕ 90 ದಿನ ಹಾಗೂ ನಂತರ ಪ್ರತಿ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರ ಮೂಲಕ ನಾಯಿಗಳನ್ನು ರೋಗದಿಂದ ರಕ್ಷಿಸಬಹುದು.
-ಡಾ.ಧರ್ಮಪಾಲ, ಸಹಾಯಕ ನಿರ್ದೇಶಕ, ಪಶು ವೈದ್ಯಕೀಯ ಆಸ್ಪತ್ರೆ, ಪುತ್ತೂರುಮಿದುಳು ಜ್ವರಕ್ಕೆ ಅನೇಕ ನಾಯಿಗಳು ಈಗಾಗಲೇ ಸಾವನ್ನಪ್ಪಿವೆ. ಸರ್ಕಾರವೇ ವರ್ಷಕ್ಕೊಮ್ಮೆ ಉಚಿತ ಸಾಮೂಹಿಕ ಲಸಿಕೆ ಹಾಕುವ ಮೂಲಕ ಈ ವೈರಸ್ ರೋಗದಿಂದ ಸಾಕು ನಾಯಿಗಳನ್ನು ರಕ್ಷಿಸಬೇಕಾಗಿದೆ.
-ಜನಾರ್ದನ ಗೌಡ ಕಯ್ಯಪ್ಪೆ, ಸ್ಥಳಿಯರು