More

    ಭಾವ-ಬುದ್ಧಿ ಪ್ರಸನ್ನತೆಯೇ ಕವಿತೆಯ ಗುರಿ

    ದಾವಣಗೆರೆ: ಕವಿತೆಯ ಉದ್ದೇಶ ಭಾವ ಮತ್ತು ಬುದ್ಧಿಯನ್ನು ಪ್ರಸನ್ನಗೊಳಿಸುವುದೇ ಹೊರತಾಗಿ ಅವರೆಡನ್ನೂ ಪ್ರಚೋದಿಸುವುದಲ್ಲ ಎಂದು ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ವಿಶ್ಲೇಷಿಸಿದರು.

    ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಗೆಳೆಯರ ಬಳಗದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಅವರ ‘ಇಂತಿ ನಮಸ್ಕಾರಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

    ಅಮೂರ್ತವಾದ ಜಗತ್ತಿನೊಳಗೆ ಅಮೂರ್ತ ಭಾವನೆಗಳಿವೆ. ಅವನ್ನು ಮೂರ್ತಗೊಳಿಸುವ ಕೆಲಸವನ್ನು ಕವಿ ಮಾಡಬೇಕು ಎಂದು ಹೇಳಿದರು.

    ಕವಿ ಪ್ರಕಾಶ್ ಕೊಡಗನೂರ್ ಪರಂಪರೆಯ ಹತ್ಯೆ ಮಾಡದೆ ಸಿದ್ಧ ಮಾದರಿಗಳನ್ನು ದಾಟಿ ತನ್ನದೇ ನೆಲೆಗಟ್ಟಿನಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಲಿ. ಏಟ್ಸ್ ಮತ್ತು ನಾನು, ಇಂತಿ ನಮಸ್ಕಾರಗಳು ಕೃತಿಗಳ ಮೂಲಕ ಶೋಧಿಸುವ, ತರ್ಕಿಸುವ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಗದ್ಯಕ್ಕೆ ಪದ್ಯದ ದೀಕ್ಷೆ ನೀಡುವ ಕಾಯಕಕ್ಕೆ ಕೈಹಾಕಿದ್ದಾರೆ ಎಂದು ತಿಳಿಸಿದರು.

    ಸಂಸ್ಕೃತಿ ಚಿಂತಕ ಡಾ. ಸಿರಾಜ್ ಅಹಮದ್ ಮಾತನಾಡಿ ಕವಿತೆಗಳಿಗೆ ಕೊನೆಯಿಲ್ಲ, ಪ್ರೀತಿಗೂ ಕೊನೆಯಿಲ್ಲ. ಸಾಮಾಜಿಕ ಮೌಲ್ಯಗಳು, ಕಟ್ಟುಪಾಡುಗಳ ಬಗೆಗೆ ಪ್ರಕಾಶ್ ತಮ್ಮ ಕೃತಿಯಲ್ಲಿ ಗಂಭೀರ ಪ್ರಶ್ನೆಗಳನ್ನು ಹಾಕಿದ್ದಾರೆ. ರೂಪಕಗಳನ್ನು ಸೃಷ್ಟಿ ಮಾಡುವುದರ ಕಡೆಗೆ ಯೋಚಿಸಬೇಕು ಎಂದು ಹೇಳಿದರು.

    ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಎಂ.ಆರ್. ಯೋಗೇಶ್ವರಯ್ಯ ಮಾತನಾಡಿ ಪ್ರಕಾಶ್ ಕೊಡಗನೂರ್‌ರ ಕವಿತೆಗಳಲ್ಲಿ ನಾಟಕೀಯತೆ ಇಲ್ಲ ಎಂದರು. ಶಿವಮೊಗ್ಗ ಪ್ರ.ದರ್ಜೆ ಕಾಲೇಜಿನ ಡಾ. ಚನ್ನೇಶ್ ಹೊನ್ನಾಳಿ ಮಾತನಾಡಿ ಸುಳ್ಳುಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಪ್ರಕಾಶ್ ಕೊಡಗನೂರ್ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕವಿತೆಗಳನ್ನು ಕಟ್ಟಿದರೂ ಲೋಕದ ಏಕಾಂತವನ್ನು ಇನ್ನಷ್ಟು ತೆರೆದ ಕಣ್ಣಿನಿಂದ ನೋಡಬೇಕಿದೆ ಎಂದು ಹೇಳಿದರು.

    ಗೆಳೆಯರ ಬಳಗದ ಲೋಕಣ್ಣ ಮಾಗೋಡ್ರ, ಎಂ.ಟಿ.ಶರಣಪ್ಪ ಇದ್ದರು. ಅರುಣಾದೇವಿ ಯು, ಭುವನ್ ಕೊಡಗನೂರ್ ಅವರಿಂದ ಗೀತ ಗಾಯನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts