ಬೆಂಗಳೂರು: ಬಿಜೆಪಿಯವರು ನೂರು ದಿನಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಲಿ. ಮೊದಲು ಅವರು ಪ್ರತಿಪಕ್ಷ. ನಾಯಕರನ್ನು ಆಯ್ಕೆ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಒಂಬತ್ತು ವರ್ಷ ಅಧಿಕಾರ ನಡೆಸಿದರು, ಕಪ್ಪು ಹಣ ವಿದೇಶದಿಂದ ತಂದರೇ, ಎರಡು ಕೋಟಿ ಉದ್ಯೋಗ ಸೃಷ್ಟಿಸಿದರೇ? ರೈತರ ಆದಾಯ ದ್ವಿಗುಣವಾಯಿತೇ? ಎಂದು ಪ್ರಶ್ನಿಸಿದರು.
ಸುಳ್ಳಿಗೆ ಆಸ್ಕರ್ ಅವಾರ್ಡ್ ಇದ್ದರೆ ಅದು ನರೇಂದ್ರ ಮೋದಿಗೆ ಕೊಡಬೇಕು. ಯಾವ ಘನ ಕಾರ್ಯ ಮಾಡಿದ್ದಕ್ಕೆ, ಯಾವ ಪುರುಷಾರ್ಥಕ್ಕೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಬೇಕು? ಎಂದು ಪ್ರಶ್ನಿಸಿದ ಅವರು ಮೋದಿ ಕೇವಲ ಮನ್ ಕೀಬಾತ್ ಮಾಡಿಕೊಂಡು ಬಂದಿದ್ದಾರೆ, ಒಂದು ಪತ್ರಿಕಾಗೋಷ್ಠಿ ಮಾಡಲು ಧೈರ್ಯವಿಲ್ಲ ಎಂದು ಕುಟುಕಿದರು.
ನಮ್ಮ ಸರ್ಕಾರ ಹಿಂದಿನ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿದೆ, ಬಿಜೆಪಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು ನಮ್ಮ ಪಕ್ಷದಲ್ಲಿ ಆಪರೇಷನ್ ಹಸ್ತ ಎಂಬುದಿಲ್ಲ. ಬಿಜೆಪಿ ಜೆಡಿಎಸ್ ಮುಖಂಡರು ಸ್ವಯಂಪ್ರೇರಣೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಶಾಸಕರು, ಮಾಜಿ ಶಾಸಕರ ಪಕ್ಷ ಸೇರ್ಪಡೆಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
.