ಬೀರೂರು: ಸಮಾಜದಲ್ಲಿ ಅಪರಾಧಗಳು ನಡೆಯದಂತೆ ತಡೆಗಟ್ಟುವಲ್ಲಿ ಎಲ್ಲರ ಪಾತ್ರವೂ ಮುಖ್ಯ. ಯುವಜನರು ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಬೀರೂರು ರೈಲ್ವೆ ಪೊಲೀಸ್ ಠಾಣೆ ಎಎಸ್ಐ ನವೀನ್ಕುಮಾರ್ ತಿಳಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈಲ್ವೆ ಪ್ರಯಾಣ ಅತ್ಯಂತ ಸುಖಕರ ಮತ್ತು ಸಂರಕ್ಷಣೆಯಿಂದ ಕೂಡಿದ್ದು ಪ್ರಯಾಣಿಕರು ಕೂಡ ಜಾಗರೂಕತೆ ವಹಿಸಬೇಕು. ಪ್ರಯಾಣದಲ್ಲಿ ಸಿಗುವ ಅಪರಿಚಿತರು ನೀಡುವ ತಿಂಡಿ, ತಿನಿಸುಗಳನ್ನು ಬಳಸುವುದು ಅಪಾಯಕಾರಿ. ಅಪರಿಚಿತರು ಸ್ನೇಹ ಬೆಳೆಸಿಕೊಂಡು ನಿಮ್ಮ ಗಮನವನ್ನು ಬೇರೆಡೆ ಸೆಳೆದು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದರು.
ಚಲಿಸುವ ರೈಲನ್ನು ಹತ್ತುವುದು ಮತ್ತು ಇಳಿಯುವುದು ಕೂಡ ಅಪಾಯಕಾರಿ. ರೈಲಿನ ಸಮಯಕ್ಕೆ ಸ್ವಲ್ಪ ಬೇಗನೇ ಬಂದು ನಿಲ್ದಾಣ ಸೇರುವುದು ಉತ್ತಮ. ರೈಲಿನಲ್ಲಿ ಪಟಾಕಿ, ಗ್ಯಾಸ್, ಪೆಟ್ರೋಲ್, ಡೀಸೆಲ್ನಂತಹ ವಸ್ತುಗಳನ್ನು ಕೊಂಡೊಯ್ಯುವುದು ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಜಾಗೃತಿ ಮೂಡಿಸಿದರು. ಸಆರ್ಪಿಎ್ ಎಎಸ್ಐ ವೆಂಕಟೇಶ್, ಸಿಬ್ಬಂದಿ ಯಾಸಿನ್, ಪ್ರಹ್ಲಾದ್, ಚತ್ರಪತಿ, ನಿರಂಜನ್ ಮತ್ತು ರೈಲ್ವೆ ಪ್ರಯಾಣಿಕರು ಇದ್ದರು.