ಶಿವಮೊಗ್ಗ: ಭದ್ರಾ ಜಲಾಶಯದಲ್ಲಿ 63 ಟಿಎಂಸಿ ನೀರಿನ ಸಂಗ್ರಹವಿದೆ. ಬೇಸಿಗೆ ಹಂಗಾಮಿಗೆ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಕೂಡಲೇ ನಾಲೆಗಳಲ್ಲಿ ನೀರು ಹರಿಸಬೇಕೆಂದು ಒತ್ತಾಯಿಸಿ ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತ ರಕ್ಷಣಾ ಸಮಿತಿ ಪ್ರಮುಖರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮುಂಗಾರು ಹಂಗಾಮಿನ ಬಳಿಕ 35 ದಿನಗಳ ಹಿಂದೆ ನಾಲೆಗಳಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಕೃಷಿ ಇಲಾಖೆ ತಜ್ಞರ ಪ್ರಕಾರ ಹಾಗೂ ರೈತರ ಅನುಭವದಂತೆ ಅಡಕೆ ಹಾಗೂ ಭತ್ತ ಸಸಿ ಮಾಡು ಇದು ಸೂಕ್ತ ಕಾಲವಾಗಿದೆ ಎಂದು ಮನವಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೇಸಿಗೆ ಹಂಗಾಮಿಗೆ ಸತತ 130 ದಿನಗಳಿಗೆ ಅಗತ್ಯವಿರುವಷ್ಟು ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಿದೆ. ಹೀಗಾಗಿ ಕೂಡಲೇ ನೀರು ಹರಿಸಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಪ್ರಮುಖರಾದ ವೈ.ಜಿ.ಮಲ್ಲಿಕಾರ್ಜುನ್, ಕೆ.ಜಿ.ಶ್ರೀಧರ್, ಜೆ.ರಘುನಾಥ್, ವಿ.ದಿನಕರ್, ವಿ.ಡಿಸೋಜ, ಎನ್.ಹೊನ್ನಪ್ಪ ಇತರರಿದ್ದರು.