ಬೆಂಗಳೂರು: ಕಸ್ತೂರಿ ನಗರದ ಕೆಫೆ ಕಾಫಿ ಡೇಯಲ್ಲಿ ಮ್ಯಾನೆಜರ್ಗೆ ಮಾರಣಾಂತಿಕ ಹಲ್ಲೆ ನಡೆಸಿದ ಖಾಸಗಿ ಕಂಪನಿ ಉದ್ಯೋಗಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ವೈಟ್ಫೀಲ್ಡ್ ನಿವಾಸಿ ಕಿರಣ್ ಕುಮಾರ್ (30) ಬಂಧಿತ. ನವೀನ್ ಕುಮಾರ್ ಗಾಯಗೊಂಡವರು.
ಖಾಸಗಿ ಕಂಪನಿ ಉದ್ಯೋಗಿ ಆರೋಪಿ ಕಿರಣ್ ಮದ್ಯಪಾನ ಮಾಡಿ ಸೋಮವಾರ ರಾತ್ರಿ 9 ಗಂಟೆಗೆ ಕಸ್ತೂರಿನಗರದಲ್ಲಿರುವ ಕಾಫಿ ಡೇಗೆ ಬಂದಿದ್ದ. ಶೌಚಗೃಹ ಎಲ್ಲಿದೆ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದ. ನೀವು ಕಾಫಿ ಡೇಯಲ್ಲಿ ಯಾವುದೇ ಪದಾರ್ಥ ತೆಗೆದುಕೊಂಡಿಲ್ಲ. ಹೀಗಾಗಿ ಇಲ್ಲಿನ ಶೌಚಗೃಹ ಬಳಸುವಂತಿಲ್ಲ ಎಂದು ಮ್ಯಾನೇಜರ್ ನವೀನ್ ಕುಮಾರ್ ಹೇಳಿದ್ದರು.
ಈ ವಿಚಾರವಾಗಿ ಕಿರಣ್ ಮ್ಯಾನೇಜರ್ ನವೀನ್ ಕುಮಾರ್ ಜತೆ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಮ್ಯಾನೇಜರ್ ಮೇಲೆ ಕಿರಣ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮ್ಯಾನೇಜರ್ನ್ನು ಕಾಫಿ ಡೇ ಸಿಬ್ಬಂದಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ರಾಮಮೂರ್ತಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮ್ಯಾನೇಜರ್ ಪ್ರಾಣಪಾಯದಿಂದ ಪಾರಾಗಿದ್ದು, ತಲೆಗೆ ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.