ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಸೆ.17ರಿಂದ ಅಕ್ಟೋಬರ್ 2ರವರೆಗೆ ‘ಸೇವೆ ಪಾಕ್ಷಿಕ’ ಹೆಸರಿನಡಿ 15ದಿನ ಗಳ ಕಾಲ ಜಿಲ್ಲೆಯಲ್ಲಿ ನಿತ್ಯವೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ಎಲ್ಲ ಸೇವಾ ಕಾರ್ಯಗಳು ಪಕ್ಷದ ಬ್ಯಾನರ್ ಅಡಿ ನಡೆಯುವುದಿಲ್ಲ. ಆದರೆ ಪಕ್ಷದ ಕಾರ್ಯ ಕರ್ತರು ಇವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಮೋದಿ ಜನ್ಮ ದಿನ 17ರಂದು ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಅಂದು ಹಿಂದು ಮಹಾಗಣಪತಿ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಶಿಬಿರವನ್ನು ಸಾಂಕೇತಿಕವಾಗಿ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಇತರೆಡೆ ತಾಲೂಕು,ಮಂಡಲಗಳ ಮಟ್ಟದಲ್ಲೂ ಈ ಶಿಬಿರಗಳನ್ನು ಆಯೋಜಿಸಲಾಗುವುದು. ದಾನಿಗಳ ಹೆಸರನ್ನು ಇ-ಪೋರ್ಟ್ ನಲ್ಲಿ ನೋಂದಾಯಿಸಲಾಗುವುದು.
ಮೋದಿ ಅವರು ಮುಖ್ಯಮಂತ್ರಿ,ಪ್ರಧಾನಿಯಾಗಿ ಸಲ್ಲಿಸಿರುವ ಸುದೀರ್ಘ 20 ವರ್ಷಗಳ ಅಧಿಕಾರಾವಧಿ ಸಾಧನೆಗಳನ್ನು ತಿಳಿಸುವ ಮೋದಿ ಃಟ್ವೆಂಟಿ ಪುಸ್ತಕಗಳನ್ನು ಜಿಲ್ಲೆಯ ನಾನಾ ವಲಯಗಳ ಪ್ರಮುಖರಿಗೆ ವಿತರಿಸಲಾಗುವುದು. ಇದರ ಉದ್ಘಾಟನಾ ಕಾರ್ಯಕ್ರಮ ವನ್ನು ಸೆ.19ರಂದು ಜಿಆರ್ಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಧ್ಯೇಯ ಪಥ ಸಂಸ್ಥೆ ಏರ್ಪಡಿಸಿದೆ. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಭಾಗವಹಿಸಲಿದ್ದಾರೆ.
ಕೋವಿಡ್ ಲಸಿಕೆ ವಿತರಿಸಿದ ಕಾರಣಕ್ಕಾಗಿ ಮೋದಿ ಅವರಿಗೆ ಅಭಿನಂದಿಸುವ ಹಾಗೂ ಅರಳಿ ಸಸಿ ನೆಡುವ ಕಾರ್ಯಕ್ರಮಗಳೂ ಎಲ್ಲೆಡೆ ನಡೆಯಲಿವೆ. ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮ ದಿನದ ಅಂಗವಾಗಿ ಸೆ.25ರಂದು ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಭಾವುಟ ಹಾರಿಸಲಾಗುವುದು ಹಾಗೂ ಉಪಾಧ್ಯಾಯರ ಭಾವ ಚಿತ್ರ ಪೂಜಿಸಲಾಗುವುದು. ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಸರಳತೆ ಕುರಿತಂತೆ ಹಲವು ಕಾರ್ಯಕ್ರಮಗಳು ಹಾಗೂ ಜಿಲ್ಲೆಯ ವಿವಿಧ ಕೆರೆಗಳ ಅಭಿವೃದ್ಧಿಗೆ ಶ್ರಮದಾನ ಮಾಡಲಾಗುವುದು ಎಂದರು.
ಪ್ರಾಮಾಣಿಕ ಪ್ರಯತ್ನ
2030ರೊಳಗೆ ಭಾರತ ಕ್ಷಯ ಮುಕ್ತವಾಗಬೇಕೆಂಬ ಗುರಿ ಇದೆ. ಆದರೆ 2025ರೊಳಗೆ ದೇಶ ಕ್ಷಯ ಮುಕ್ತವಾಗ ಬೇಕೆಂಬ ಬಯಕೆ ಪ್ರಧಾನಿ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕ್ಷಯ ರೋಗಿಗಳ ವಿವರ ಪಡೆದು ಆರ್ಥಿಕವಾಗಿ ಹಿಂದುಳಿದ ರೋಗಿಗಳನ್ನು ದತ್ತು ಪಡೆದು ಅವರನ್ನು ರೋಗ ಮುಕ್ತರನ್ನಾಗಿ ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಜತೆ ಚರ್ಚಿಸುವುದಾಗಿ ತಿಳಿಸಿದರು.
ಕುಡಾ ಅಧ್ಯಕ್ಷ ಸಿದ್ದಾಪುರ ಸುರೇಶ್,ಪಕ್ಷದ ಮುಖಂಡರಾದ ಮಾಧುರಿಗಿರೀಶ್,ಸಂಪತ್ಕುಮಾರ್,ನಂದಿನಾಗರಾಜ್,ನಾಗರಾಜ್ ಬೇದ್ರೆ,ದಗ್ಗೆ ಶಿವಪ್ರಕಾಶ್,ನರೇಂದ್ರ,ಚಾಲುಕ್ಯನವೀನ್ ಇದ್ದರು.