ಬಳ್ಳಾರಿ: ಕಂಟೈನ್ಮೆಂಟ್ ಝೋನ್ನಿಂದ ಬಂದ ವಿದ್ಯಾರ್ಥಿಯೊಬ್ಬ ವಾಹನ ಚಾಲಕನ ಎಡವಟ್ಟಿನಿಂದಾಗಿ ಎಲ್ಲರಂತೆ ಸಾಲಿನಲ್ಲಿ ನಿಂತು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡಿದ್ದಲ್ಲದೆ, ಕೊಠಡಿಯಲ್ಲಿ ಅವರೊಂದಿಗೇ ಪರೀಕ್ಷೆಗೂ ಕುಳಿತುಕೊಂಡಿದ್ದ. ಈ ಘಟನೆಯಿಂದಾಗಿ ಪರೀಕ್ಷೆಗೆ ಕುಳಿತಿದ್ದ ಇತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಆವರಿಸಿದೆ.
ಕಂಪ್ಲಿಯ ಎಸ್ಜೆಎಸ್ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಕಂಟೈನ್ಮೆಂಟ್ ಝೋನ್ನಿಂದ ವಿದ್ಯಾರ್ಥಿಯೊಬ್ಬ ಆಗಮಿಸಬೇಕಾಗಿತ್ತು. ಆತನನ್ನು ವಿಶೇಷ ವಾಹನ ಮೂಲಕ ಕರೆತರಲು ನೋಡಲ್ ಅಧಿಕಾರಿಯನ್ನು ನಿಯಮಿಸಲಾಗಿತ್ತು. ಬೆಳಗ್ಗೆ 7ರಿಂದ 8.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಯನ್ನು ತಂದು ಒಪ್ಪಿಸುವ ಹೊಣೆ ನೀಡಲಾಗಿತ್ತು. ಆದರೆ, ಆ ಪರೀಕ್ಷಾರ್ಥಿಯನ್ನು ಕರೆತಂದ ಡ್ರೈವರ್, 7.15ಕ್ಕೆ ಶಾಲೆ ಗೇಟ್ ಬಳಿಯೇ ಬಿಟ್ಟು ಹೋಗಿದ್ದಾನೆ. ಬಳಿಕ ಎಲ್ಲರಂತೆ ಸಾಲಿನಲ್ಲಿ ನಿಂತು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡ ಆ ವಿದ್ಯಾರ್ಥಿ, ಕೊಠಡಿಯಲ್ಲಿ ಪರೀಕ್ಷೆಗಾಗಿ ಕುಳಿತಿದ್ದಾನೆ.
ಇದನ್ನೂ ಓದಿರಿ ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ
ಇತ್ತ ಪರೀಕ್ಷಾ ಮುಖ್ಯ ಅಧೀಕ್ಷಕಿ ಶಕುಂತಲ ಅವರು ವಿಶೇಷ ಪರೀಕ್ಷಾರ್ಥಿಗಾಗಿ ಗೇಟ್ ಬಳಿಯೇ ಕಾಯುತ್ತ ನಿಂತಿದ್ದರು. ಕೊನೆಗೆ 9.30 ಆದರೂ ಪರೀಕ್ಷಾರ್ಥಿಯ ಸುಳಿವಿರದಿದ್ದರಿಂದ ಚಾಲಕನಿಗೆ ಫೋನ್ ಮಾಡಿ ವಿಚಾರಿಸಿದರು. ಆತನಾಗಲೇ ಪರೀಕ್ಷಾ ಕೇಂದ್ರ ತಲುಪಿದ್ದಾಗಿ ಚಾಲಕ ಹೇಳುತ್ತಿದ್ದಂತೆ ಪರೀಕ್ಷಾ ಕೋಣೆಗೆ ತೆರಳಿ ಆತನನ್ನ ಗುರುತಿಸಿ, ವಿಶೇಷ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.
ಈ ಘಟನೆಯಿಂದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮನೆಮಾಡಿತ್ತು.
ಥರ್ಮಲ್ ಸ್ಕ್ರೀನಿಂಗ್ ವೇಳೆ ಕುಸಿದುಬಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ