ಶಿವಮೊಗ್ಗ: ಎದೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಗಾಂಧಿ ಬಜಾರ್ ನಿವಾಸಿಯೊಬ್ಬರನ್ನು ಗುರುವಾರ ಏರ್ ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ದು ಅಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ಏರ್ಲಿಫ್ಟ್ ಮಾಡಿದಂತಾಗಿದೆ. ಹಾಗೂ ಏರ್ ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಲಾಗಿದೆ.
ಗಾಂಧಿ ಬಜಾರ್ ವ್ಯಕ್ತಿಯೊಬ್ಬರು ನೆಹರು ಕ್ರೀಡಾಂಗಣದಲ್ಲಿ ವಾಯುವಿಹಾರ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಕೂಡಲೆ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿತ್ತು. ಹೀಗಾಗಿ ಬುಧವಾರ ಸಂಜೆ ಚೆನ್ನೈನಿಂದ ಏರ್ ಆಂಬುಲೆನ್ಸ್ ತರಿಸಿಕೊಳ್ಳಲಾಗಿತ್ತು.
ಇಂದು ಬೆಳಗ್ಗೆಯೇ ಏರ್ ಆಂಬುಲೆನ್ಸ್ನಲ್ಲಿ ಅವರನ್ನು ಕೊಂಡೊಯ್ಯಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ಟೇಕಾಫ್ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಮಧ್ಯಾಹ್ನ 1.05ಕ್ಕೆ ಟೇಕಾಫ್ ಆದ ಏರ್ ಆಂಬುಲೆನ್ಸ್ 1.40ಕ್ಕೆ ಮಂಗಳೂರು ತಲುಪಿದೆ. ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.