ಗಂಗಾವತಿ: ನಗರದ ಶ್ರೀರಾಮ ಮಂದಿರದಲ್ಲಿ 46ನೇ ವರ್ಷದ ಶ್ರೀರಾಮ ನವರಾತ್ರೋತ್ಸವ ನಿಮಿತ್ತ ಪವಮಾನ ಹೋಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀರಾಮಚಂದ್ರ ಸೇವಾ ಟ್ರಸ್ಟ್ ಮತ್ತು ಶ್ರೀರಾಮಮಂದಿರ ನೇತೃತ್ವದಲ್ಲಿ ಏ.9ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಅಷ್ಟಮಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯ ಮೂರ್ತಿಗಳಿಗೆ ಅಭಿಷೇಕ, ಹೂವಿನ ಅಲಂಕಾರ, ಶತನಾಮಾನವಳಿ ಪಾರಾಯಣ, ಪವಮಾನ ಹೋಮ, ಪೂರ್ಣಾಹುತಿ ಮತ್ತು ಪ್ರಸಾದ ವಿತರಣೆ ಜರುಗಿತು.
ದೇವಾಲಯದ ಪ್ರಧಾನ ಅರ್ಚಕ ಅನಿಲ್ಭಟ್ ಜೋಶಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯ ಆರಂಭದಿಂದ ಶ್ರೀರಾಮ ನವರಾತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, 9 ದಿನ ವಿಭಿನ್ನ ಕಾರ್ಯಕ್ರಮ ಜರುಗಲಿವೆ ಎಂದರು.
ದೇವಾಲಯದ ಮುಖ್ಯಸ್ಥ ಎ.ಶ್ರೀನಿವಾಸ, ಮುಖಂಡ ಭೀಮಸೇನ್ಭಟ್ ಬಸಾಪಟ್ಟಣ ಸೇರಿ ಶ್ರೀರಾಮ, ಶ್ರೀ ಗುರುಸೌರ್ವಭೌಮ, ನವವೃಂದಾವನ, ಶ್ರೀವಿರೂಪಾಕ್ಷೇಶ್ವರ ಭಜನಾ ಮಂಡಳಿ ಸದಸ್ಯರು ಮತ್ತು ಆರ್ಯವೈಶ್ಯ ಸಮಾಜದ ಮುಖಂಡರಿದ್ದರು.