ಬೆಂಗಳೂರು: ಕರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್-19 ಬಾಧಿತ ರಾಜ್ಯದ 9 ಜಿಲ್ಲೆಗಳನ್ನು ಲಾಕ್ಡೌನ್ ಮಾಡಲಾಗಿದೆ.
ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮಾ.27ರಿಂದ ನಡೆಯಬೇಕಿದ್ದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ಯಾವಾಗ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ ಎಂಬುದನ್ನು ಮಾ.31ರ ನಂತರ ಘೋಷಿಸಲಾಗುವುದು ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಗ್ಗೆ ಘೋಷಿಸಿದ್ದಾರೆ.
ಹಾಗೇ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆ (ಮಾ.23) ನಡೆಬೇಕಿದ್ದ ಕೊನೇ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
9 ಜಿಲ್ಲೆಗಳು ಮಾರ್ಚ್ 31ರವರೆಗೂ ಸಂಪೂರ್ಣ ಬಂದ್ ಆಗಲಿವೆ. ಸಾರಿಗೆ ವ್ಯವಸ್ಥೆ ಕಷ್ಟವಾಗುತ್ತದೆ. ಇದರಿಂದ ಬೇರೆ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಅಲ್ಲದೆ ಕರೊನಾ ವೈರಸ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳಿಗೆ ನಾಳೆ ನಡೆಯಬೇಕಿದ್ದ ಕೊನೆಯ ಇಂಗ್ಲಿಷ್ ಪರೀಕ್ಷೆಯನ್ನು ಮುಂದೂಡಿದ್ದೇವೆ. ಏಪ್ರಿಲ್ 1ರನಂತರ ಪರೀಕ್ಷಾ ದಿನಾಂಕ ಘೋಷಿಸಲಾಗುವುದು ಎಂದಿದ್ದಾರೆ.
ಎರಡನೇ ಪಿಯುಸಿಯ ಕೊನೆಯ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ನನ್ನ ಹೇಳಿಕೆ.
Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮಾರ್ಚ್ 22, 2020