ಹಾಸನ: ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಯಂಚಾಲಿತ ಎಲ್ಇಡಿ ಬಲ್ಪ್ ಅಳವಡಿಸುವ ಮೂಲಕ ವಿದ್ಯುಚ್ಛಕ್ತಿ ಹಾಗೂ ಖರ್ಚು ಉಳಿತಾಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಬೀದಿ ದೀಪಗಳನ್ನು ಸ್ವಯಂಚಾಲಿತ ಎಲ್ಇಡಿ ಬಲ್ಪ್ಗಳಾಗಿ ಬದಲಾವಣೆ ಮಾಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಯಂಚಾಲಿತ ಎಲ್ಇಡಿ ಬಲ್ಪ್ ಅಳವಡಿಕೆಯಿಂದ ವಿದ್ಯುತ್ ಮತ್ತು ಹಣ ಉಳಿತಾಯವಾಗಲಿದೆ. ಎರಡು ನಗರಸಭೆ ಹಾಗೂ ಉಳಿದ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವಿದ್ಯುತ್ಗೆ ಮಾಸಿಕ 11.88 ಕೋಟಿ ರೂ. ವೆಚ್ಚವಾಗುತ್ತಿದ್ದು, ಎಲ್ಇಡಿ ಬಲ್ಪ್ಗಳ ಅಳವಡಿಕೆ ನಂತರ 4.28 ಕೋಟಿ ರೂ.ಗೆ ಇಳಿಕೆಯಾಗಲಿದೆ ಎಂದರು.
ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಕಂಪನಿಯವರು ಸ್ಥಳೀಯ ಸಂಸ್ಥೆಗಳ ವಿದ್ಯುಚ್ಛಕ್ತಿ ಬಳಕೆಯ ಟೆಂಡರ್ ಪಡೆಯುತ್ತಿದ್ದು, ಅದರ ಪ್ರಕಾರ ಎಲ್ಇಡಿ ಬಲ್ಪ್ಗಳ ಅಳವಡಿಕೆಯಿಂದ 7.6 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಬೀದಿ ದೀಪಗಳನ್ನು ಎಲ್ಇಡಿ ಬಲ್ಪ್ ಮತ್ತು ಸ್ವಯಂ ಚಾಲಿತವಾಗಿ ಪರಿವರ್ತಿಸಲು ಸುಮಾರು 1,69,63,970 ರೂ. ಖರ್ಚಾಗಲಿದ್ದು, ಶೇಕಡಾ 64.2ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಿ.ಎ. ಜಗದೀಶ್, ನಗರಸಭೆ ಸಹಾಯಕ ಇಂಜಿನಿಯರ್ ರಂಗಸ್ವಾಮಿ, ಆಯುಕ್ತ ಆರ್. ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು.