ಕೆ.ಆರ್.ನಗರ: ಪಟ್ಟಣದ ಶ್ರೀರಾಮ ಬಡಾವಣೆಯ ನಿವಾಸಿಯೂ ಆದ ಸಾರಿಗೆ ಬಸ್ ಚಾಲಕ ಕೆ.ಎಸ್.ನಾಗೇಶ್ ಮತ್ತು ನಿರ್ವಾಹಕ ಶಿವನಂಜ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಸ್ ಅನ್ನು ಕನ್ನಡ ದ್ವಜ ಮತ್ತು ಹೂವಿನಿಂದ ಅಲಂಕಾರ ಮಾಡುವ ಮೂಲಕ ಗಮನ ಸೆಳೆದರು.
ಬಸ್ನಲ್ಲಿ ಧ್ವನಿವರ್ಧಕ ಅಳವಡಿಸಿ ಕನ್ನಡ ಗೀತೆಗಳನ್ನು ಕೇಳಿಸುವ ಮೂಲಕ ತಮ್ಮ ಕನ್ನಡ ಪ್ರೇಮ ಮೆರೆದರು. 7 ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವದ ದಿನದಂದು ಭಾಷಾ ಕಾಯಕ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಇಬ್ಬರೂ ತಮ್ಮ ಸ್ವಂತ ಖರ್ಚಿನಿಂದ ಬಸ್ ಅನ್ನು ಅಲಂಕಾರ ಮಾಡುತ್ತಿರುವುದು ವಿಶೇಷ.
ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು: ಬಸ್ಗೆ ಮಾಡಲಾಗಿದ್ದ ಅಲಂಕಾರಕ್ಕೆ ಮಾರುಹೋದ ವಿದ್ಯಾರ್ಥಿಗಳು ಮತ್ತು ಜನರು ಬಸ್ ನಿಂತಲೆಲ್ಲ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.