ಶಿವಮೊಗ್ಗ: ಕರೊನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸರ್ಕಾರಿ ನೌಕರರು ಆಯುಷ್ ಇಲಾಖೆಯಿಂದ ನೀಡಲಾಗುತ್ತಿರುವ ಔಷಧ ಸೇವಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಸರ್ಕಾರಿ ನೌಕರರಿಗೆ ಆಯುಷ್ ಇಲಾಖೆಯ ಆಯುರ್ವೆದ ಔಷಧಗಳನ್ನು ವಿತರಿಸಿ ಮಾತನಾಡಿ, ಜನರ ಸೇವೆಯಲ್ಲಿ ತೊಡಗಿರುವ ಸರ್ಕಾರಿ ನೌಕರರು ಈ ಔಷಧ ಸೇವಿಸಿ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಕರೊನಾ ವೈರಸ್ಗೆ ಆಯುರ್ವೆದದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದು ವೈರಾಣುವಿನಿಂದ ಬಳಲುವುದಕ್ಕಿಂತ ರೋಗ ಬರುವ ಮೊದಲೇ ಆಯುರ್ವೆದ ಔಷಧ ಸೇವಿಸಿ ಸುರಕ್ಷಿತವಾಗಿರುವುದು ಒಳ್ಳೆಯದು ಎಂದರು.
ನಮಗೆ ಅನ್ಯದೇಶದ ವೈದ್ಯ ಪರಂಪರೆಗಳ ಮೇಲೆ ಅನನ್ಯ ನಂಬಿಕೆ ಇದೆ. ಆದರೆ, ನಮ್ಮ ದೇಶದ, ಮಹರ್ಷಿ ಪ್ರಣೀತ, ಆಯುರ್ವೆದೋಕ್ತ ಚಿಕಿತ್ಸಾ ಪದ್ಧತಿಗಳ ಮೇಲೆ ಮಾತ್ರ ನಂಬಿಕೆ ಕಡಿಮೆ. ನಮ್ಮ ಚಿಕಿತ್ಸಾ ಪದ್ಧತಿಗಳನ್ನು ಒದಗಿಸಲು ನೂರೆಂಟು ಕಾನೂನು ತೊಡಕುಗಳಿವೆ. ಇಂತಹ ವಿಷಮ ಪರಿಸ್ಥಿತಿ ನಿವಾರಣೆಯಾಗಿ ಜನಸಾಮಾನ್ಯರಿಗೆ ಆಯುರ್ವೆದೀಯ ಚಿಕಿತ್ಸಾ ಪದ್ಧತಿಗಳು ಸುಲಭವಾಗಿ ಸಿಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಡಾ. ಸಿ.ಎ.ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಐ.ಪಿ.ಶಾಂತರಾಜ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಪ್ರಮುಖರಾದ ಪಾಪಣ್ಣ, ನಿರಂಜನಮೂರ್ತಿ, ಅರುಣಕುಮಾರ್, ಚೆನ್ನಪ್ಪ, ಗಣೇಶ್ ಇತರರಿದ್ದರು.