ಧಾರವಾಡ: ಕಾಲೇಜು ಪ್ರಾಚಾರ್ಯರಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಮಹಿಳೆಗೆ 1 ವರ್ಷ ಜೈಲು ಶಿಕ್ಷೆ, 11 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಗುರುವಾರ ಆದೇಶಿಸಿದೆ.
ರಮಾ ಕುಲಕರ್ಣಿ ಶಿಕ್ಷೆಗೆ ಗುರಿಯಾದ ಮಹಿಳೆ. ಇವರು 2018ರ ಮೇ 3ರಂದು ನಗರದ ಕರ್ನಾಟಕ ವಿಜ್ಞಾನ ಕಾಲೇಜಿಗೆ ನುಗ್ಗಿ ಪ್ರಾಚಾರ್ಯ ಡಾ. ಚನ್ನಪ್ಪ ಮೂಲಿಮನಿ ಎಂಬುವರೊಂದಿಗೆ ಜಗಳವಾಡಿದ್ದರು. ಪ್ರಥಮ ಪಿಯುಸಿ ಓದುತ್ತಿದ್ದ ತನ್ನ ಮಗ ಅನುತ್ತೀರ್ಣ ಆಗಲು ನೀನೇ ಕಾರಣ ಎಂದು ಪ್ರಾಚಾರ್ಯ ಮೂಲಿಮನಿ ಅವರಿಗೆ ಬೈದು ಜಾತಿನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಮೂಲಿಮನಿ ಅವರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ್ದ ಎಸಿಪಿ ಎಂ.ಎನ್. ರುದ್ರಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ್ದ ನ್ಯಾ. ನ್ಯಾ. ಸಿ.ಎಂ. ಗಂಗಾಧರ ಅವರು ಗುರುವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
ರಮಾ ಕುಲಕರ್ಣಿ ಮಹದಾಯಿ, ಕಳಸಾ- ಬಂಡೂರಿ ಸೇರಿ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.