ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಉತ್ತಮ ಅಂಡರ್ ಪಾಸ್ ನಿರ್ಮಿಸಬೇಕೆಂದು ಹಲವಾರು ಬಾರಿ ಒತ್ತಾಯಿಸಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕ್ರಮ ವಹಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.
2021ರ ಅಕ್ಟೋಬರ್ 21ರಂದು ಸಾವಿರಾರು ಜನ ರೈತರು ರಸ್ತೆ ತಡೆ ನಡೆಸಿದ್ದಾಗ ಅಂದಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,
ಅಂಡರ್ ಪಾಸ್ ನಿರ್ಮಾಣ ಸಂಬಂಧ, ಸಂಸದರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರು ಎನ್.ಎಚ್.ಎ.ಐ. ಮತ್ತು ಒ ಆ್ಯಂಡ್ ಎಂ ಅವಧಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವುದಾಗಿ ಲಿಖಿತವಾಗಿ ತಿಳಿಸಿದ್ದರು. 2 ವರ್ಷಗಳಾದರೂ ಯಾವುದೇ ರೀತಿಯ ಕಾಮಗಾರಿ ಪ್ರಾರಂಭಿಸಿಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತಹ ಮಲ್ಲಶೆಟ್ಟಿಹಳ್ಳಿ, ಕರೀಲಕ್ಕೇನಹಳ್ಳಿ, ಬುಳ್ಳಾಪುರ, ಈಚಘಟ್ಟ, ಜಂಪೇನಹಳ್ಳಿ, ದೊಡ್ಡರಂಗವ್ವನಹಳ್ಳಿ, ಕೊಡಗನೂರು, ಕಬ್ಬೂರು, ಬೊಮ್ಮೇನಹಳ್ಳಿ ಹಾಗೂ ಸುಲ್ತಾನಿಪುರ ಈ ಗ್ರಾಮಗಳಿಗೆ ಓಡಾಡುವ ನೂರಾರು ಜನ ರೈತರು ಹಾಗೂ ಸಂಚರಿಸುವ ವಾಹನಗಳಿಗೆ ಸ್ಥಳವಿಲ್ಲದೆ ಬಹಳ ತೊಂದರೆಯಾಗಲಿದೆ. ಗ್ರಾಮಸ್ಥರು ಅನಾರೋಗ್ಯದ ಕಾರಣ ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದರೆ ಸುಮಾರು 2-3 ಕಿಲೋಮೀಟರ್ ಸುತ್ತುವರೆದು ಹೆದ್ದಾರಿಗೆ ಬರಬೇಕಾಗುತ್ತದೆ. ಇದರಿಂದ ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರ ಜೀವ ಉಳಿಸುವುದು ಕಷ್ಟಕರವಾಗಿದೆ ಎಂದು ಕಿಡಿಕಾರಿದರು.
ಈ ಹಿಂದ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ವಾಹನಗಳು ಹೊರ ಹೋಗಲು ಮತ್ತು ಒಳ ಬರಲು ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡುವುದಾಗಿ ಸುಳ್ಳು ಭರವಸೆ ನೀಡಿರುವುದು ಖಂಡನೀಯ. ಕಾರಣ ಈಗಲಾದರೂ ಅಧಿಕಾರಿಗಳು ಕೊಟ್ಟ ಭರವಸೆಯಂತೆ ಸಮರ್ಪಕ ಬ್ರಿಡ್ಜ್ ಹಾಗೂ ರಸ್ತೆ ನಿರ್ಮಿಸಬೇಕು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ರೈತ ಸಂಘದಿಂದ ಹೋರಾಟ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬುಳ್ಳಾಪುರದ ಹನುಮಂತಪ್ಪ, ಈಚಘಟ್ಟದ ಎ.ಆರ್.ಕರಿಬಸಪ್ಪ, ಎಸ್.ಟಿ.ಪರಮೇಶ್ವರ್, ಕರೇಕಟ್ಟೆ ಕಲೀಂಉಲ್ಲಾ, ಎನ್.ಬಸವರಾಜ್ ದಾಗಿನಕಟ್ಟೆ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ ಇದ್ದರು.