ಹುಣಸೂರು: ದಾಂಪತ್ಯದಲ್ಲಿ ಬಿರುಕು ಮೂಡಿದ ನಂತರ ಮಕ್ಕಳ ಪಾಲನೆಗೆ ಪತಿಯಿಂದ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪತ್ನಿಯ ಮನವೊಲಿಸಿದ ನ್ಯಾಯಾಧೀಶರು ಮತ್ತೆ ಪತಿಯೊಂದಿಗೆ ಜೀವನ ನಡೆಸುವಂತೆ ರಾಜಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್ನಲ್ಲಿ ಅರಕಲಗೂಡಿನ ಲೋಕೇಶ್ ಮತ್ತು ಹುಣಸೂರಿನ ಪಲ್ಲವಿ ನ್ಯಾಯಾಧೀಶರ ಹಿತನುಡಿಗಳನ್ನು ಕೇಳಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 2021ರಲ್ಲಿ ಪಲ್ಲವಿ, ಪತಿಯೊಂದಿಗೆ ಬಾಳಲು ಆಗದ ಕಾರಣ ಇಬ್ಬರು ಮಕ್ಕಳ ಲಾಲನೆ ಪಾಲನೆಗೆ ಜೀವನಾಂಶ ಕೋರಿ ಮೊಕದ್ದಮೆ ದಾಖಲಿಸಿದ್ದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿರಿನ್ ಜಾವಿದ್ ಅನ್ಸಾರಿ ಮತ್ತು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಾಟೀಲ ಮೋಹನ್ಕುಮಾರ್ ಭೀಮನಗೌಡ ಅವರು ದಂಪತಿಗೆ ಬುದ್ಧಿಮಾತು ಹೇಳಿದರು. ಒಂದಾಗಿ ಬಾಳಲು ಮನವೊಲಿಸಿದರು. ದಂಪತಿ ಕೂಡ ಇದಕ್ಕೆ ಒಪ್ಪಿಕೊಂಡರು. ನ್ಯಾಯಾಲಯದಲ್ಲೇ ಇಬ್ಬರಿಗೂ ಹೂವಿನ ಹಾರ ಬದಲಾಯಿಸಿಕೊಳ್ಳಲು ತಿಳಿಸಿ, ಶುಭಹಾರೈಸಿ ಸಿಹಿ ನೀಡಿದರು. ವಕೀಲರು ಸಾಕ್ಷಿಯಾದರು.