ಬೆಳಗಾವಿ:ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟರ್ ಆಪ್ ಪ್ಯಾರೀಸ್ನಿಂದ ತಯಾರಾದ ಗಣೇಶನ ವಿಗ್ರಹಗಳನ್ನು ಸ್ವಪ್ರೇರಣೆಯಿಂದ ತ್ಯಜಿಸಿ, ಭಕ್ತರು ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ, ಪಟಾಕಿ ರಹಿತ ಗಣೇಶೋತ್ಸವ ಆಚರಿಸಿದರೇ, ಶಬ್ದ ಮಾಲಿನ್ಯ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಜಿ ಹೇಳಿದ್ದಾರೆ.
ಶನಿವಾರ ನಗರದ ಡಾ.ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ ಅಸೋಶೀಯೇಷನ್ ಪಾರ್ ಸೈನ್ಸ ಎಜ್ಯುಕೇಶನ್, ರಾಜ್ಯ ವಿಜ್ಞಾನ ಪರಿಷತ್ತು ಇವರ ಸಹಯೋಗದೊಂದಿಗೆ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಣ್ಣಿನ ಗಣೇಶ ವಿಗ್ರಹಗಳ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಭಾರತೀಯ ಹಬ್ಬಗಳು ಪರಿಸರ ಆರಾಧನೆ ಜೊತೆಗೆ ಪ್ರಕೃತಿ ಮಾತೆಯನ್ನು ಪೂಜಿಸಿ ಗೌರವಿಸುವಂತವು. ಆದರೆ ಇತ್ತೀಚಿನ ಆಧುನಿಕತೆಯ ಭರಾಟೆಯಿಂದಾಗಿ ಹಬ್ಬಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಪ್ರಕೃತಿಗೆ ಮಾರಕವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಡಾ.ಅಲ್ಲಮ ಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ನಾಡಿನ ಜನತೆ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಅಧಿಕಾರಿ ಡಾ. ಜಿ.ಎಮ್. ಪಾಟೀಲ, ಡಾ.ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ,ಸಮಾಜ ಸೇವಕ ಗೋವಿಂದ ಕುಲಕರ್ಣಿ, ಅಭಿಯಂತರ ಅಥರ್ವ ಬಾಪಟ್ ಇದ್ದರು. ಪರಿಸರ ಸ್ನೇಹಿ ಅತ್ಯುತ್ತಮ ಮಣ್ಣಿನ ವಿಗ್ರಹ ತಯಾರಿಸಿದ ಎಮ್. ಆರ್. ಭಂಡಾರಿ ಶಾಲೆಯ ಕು. ಗಣೇಶ ಬಡಿಗೇರ ಪ್ರಥಮ, ಕರ್ನಾಟಕ ಪಬ್ಲಿಕ್ ಶಾಲೆ ರಾಮತೀರ್ಥ ನಗರದ ಕು. ಆದಿತ್ಯ ಪರೀಟ ದ್ವಿತೀಯ ಹಾಗೂ ಸಂದೀಪ ಮುಳಕೂರ ತೃತೀಯ ಸ್ಥಾನ ಪಡೆದುಕೊಂಡರು.