ರಾಣೆಬೆನ್ನೂರ: ಜಮೀನು ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ದೊಡ್ಡಪ್ಪನನ್ನೇ ಕುಡಗೋಲಿನಿಂದ ಹತ್ಯೆಗೈದ ಘಟನೆ ತಾಲೂಕಿನ ಕಜ್ಜರಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ನಾಗಪ್ಪ ಫಕ್ಕಿರಪ್ಪ ಬೇಲೂರು (59) ಕೊಲೆಯಾದ ವ್ಯಕ್ತಿ. ಈತನ ಸಹೋದರನ ಮಗ ಹನುಮಂತ ಕರಿಯಪ್ಪ ಬೇಲೂರು (26) ಕೊಲೆ ಮಾಡಿದ ಆರೋಪಿ. ಇಬ್ಬರ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ನಡೆದಿದೆ. ಇದರಿಂದ ರೋಸಿಹೋದ ಹನುಮಂತಪ್ಪ ಜಮೀನಿನಲ್ಲಿಯೇ ಕುಡಗೋಲಿನಿಂದ ನಾಗಪ್ಪನ ತಲೆ, ಮುಖದ ಮೇಲೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ನಾಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆರೋಪಿ ಹನುಮಂತನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಸುರೇಶ ಸಗರಿ, ಪಿಎಸ್ಐ ಮೇಘರಾಜ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಪ್ರಕರಣ, ಒಬ್ಬನ ಬಂಧನ
ಹಾವೇರಿ: ಕಳಪೆ ಖುಲ್ಲಾ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪದ ಮೇಲೆ ಬ್ಯಾಡಗಿಯಲ್ಲಿ 4, ಹಿರೇಕೆರೂರ ಹಾಗೂ ಗುತ್ತಲದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕೆ.ಜಿ. ದೇವರಾಜ್ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ಸಮಯದಲ್ಲಿ ಅಕ್ರಮವಾಗಿ ಬೀಜ ದಾಸ್ತಾನು ಮಾಡಿರುವುದು ತಿಳಿದು ಬಂದಿದೆ. ಆದ್ದರಿಂದ ಬೀಜ ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಲಾರಿ ಡಿಕ್ಕಿಯಾಗಿ ಮಹಿಳೆ ಸಾವು
ರಾಣೆಬೆನ್ನೂರ: ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ದೇವರಗುಡ್ಡ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ದೇವರಗುಡ್ಡ ಗ್ರಾಮದ ಗಂಗಮ್ಮ ಚಿಕ್ಕಪ್ಪ ಸಂಶಿ (40) ಮೃತಪಟ್ಟ ಮಹಿಳೆ.
ಈಕೆ ತನ್ನ ಮಗನೊಂದಿಗೆ ಬೈಕ್ನಲ್ಲಿ ರಾಣೆಬೆನ್ನೂರಿಗೆ ಬರುತ್ತಿದ್ದರು. ದಾರಿ ಮಧ್ಯೆ ಲಾರಿ ಡಿಕ್ಕಿ ಹೊಡೆದಿದೆ. ಮಗ ಹನುಮಂತಪ್ಪನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.